ಶೋಭಾ ಕರಂದ್ಲಾಜೆಗೆ ದಿನೇಶ್ ಗುಂಡೂರಾವ್ ಪತ್ನಿ ತಿರುಗೇಟು

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ಹಾಗೂ ಕಾರ್ಯಾಕಾರಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದಲಿತರನ್ನು ಮದುವೆಯಾಗಿದ್ದಾರಾ? ಉತ್ತರಿಸಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ನೀಡಿದ್ದ ಹೇಳಿಕೆಗೆ ದಿನೇಶ್ ಗುಂಡೂರಾವ್ ಪತ್ನಿ ತಬು ರಾವ್ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಪ್ರತಿಕ್ರಿಯೆ ನೀಡಿರೋ ತಬು ರಾವ್, ರಾಜಕೀಯ ಲಾಭಕ್ಕಾಗಿ ಶೋಭಾ ಕರಂದ್ಲಾಜೆ ನಮ್ಮ ವೈಯಕ್ತಿಕ ಜೀವನದಲ್ಲಿ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರ ಪತ್ನಿ ದಲಿತರೇ? ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರು ಯಾರನ್ನು ಮದುವೆಯಾಗಿದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ನಾನು ಮುಸ್ಲಿಂ ಜನಾಂಗದಲ್ಲಿ ಜನಿಸಿರುವುದು ಹಾಗೂ ನನ್ನ ಪತಿ ದಿನೇಶ್ ಗುಂಡೂರಾವ್ ಬ್ರಾಹ್ಮಣರು ಅನ್ನೋದು ಗುಟ್ಟಿನ ವಿಚಾರವೇನಲ್ಲ. ನಾವು ಮದುವೆಯಾದ 20 ವರ್ಷಗಳಿಂದ ಸಂತೋಷವಾಗಿದ್ದೇವೆ. ಒಂದು ಬಾರಿಯೂ ಸಮುದಾಯದ ವಿಚಾರ ನಮ್ಮ ಮಧ್ಯೆ ಬಂದಿಲ್ಲ. ನಮ್ಮಿಬ್ಬರಲ್ಲಿ ಯಾರೂ ಮತಾಂತರವಾಗದಿದ್ದರೂ ನಮ್ಮ ಜೀವನ ಚೆನ್ನಾಗಿದೆ. ಎಲ್ಲಾ ಧರ್ಮಗಳನ್ನು ಗೌರವಿಸುವ ಅಭ್ಯಾಸವನ್ನು ನಾವು ರೂಢಿಸಿಕೊಂಡಿದ್ದೇವೆ. ವಿವಿಧತೆಯಲ್ಲಿ ಏಕತೆ ಎಂಬುದು ಭಾರತದ ನೀತಿ. ನಾವು ಅದನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ತಬು ಫೇಸ್‍ಬುಕ್‍ನಲ್ಲಿ ಹೇಳಿದ್ದಾರೆ.

ಒಬ್ಬ ಗೃಹಿಣಿಯಾಗಿ ಹಾಗೂ ಎರಡು ಮಕ್ಕಳ ತಾಯಿಯಾಗಿ ನಾನು ಕುಮಾರಿ ಶೋಭಾ ಕರಂದ್ಲಾಜೆ ತಮ್ಮ ರಾಜಕೀಯ ಲಾಭಗಳಿಗಾಗಿ ನಮ್ಮ ವೈಯಕ್ತಿಕ ಜೀವನದಲ್ಲಿ ಮಧ್ಯಪ್ರವೇಶಿಸುವುದನ್ನು ಖಂಡಿಸ್ತೀನಿ. ಸಂಬಂಧವಿಲ್ಲದ ವಿಷಯದಲ್ಲಿ ನಮ್ಮ ಕುಟುಂಬವನ್ನು ಮಧ್ಯೆ ಎಳೆದಿದ್ದಾರೆ. ಇದು ಸಮಾಜದಲ್ಲಿ ಕೋಮು ಸಂಘರ್ಷ ಉಂಟುಮಾಡುವುದೇ ಅವರ ಏಕೈಕ ಉದ್ದೇಶ ಅನ್ನೋದನ್ನ ಸೂಚಿಸುತ್ತದೆ. ಕುಮಾರಿ ಶೋಭಾ ಕರಂದ್ಲಾಜೆಯಂತಹ ನಾಯಕಿ ಈ ಮಟ್ಟಕ್ಕೆ ಇಳಿದಿರುವುದು ದುರಾದೃಷ್ಟಕರ ಎಂದು ತಬು ಕಿಡಿ ಕಾರಿದ್ದಾರೆ.

ಬಿಜೆಪಿ ನಾಯಕರು ದಲಿತರ ಮನೆಯಲ್ಲಿ ಊಟ ಮಾಡುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ-ಕಾಂಗ್ರೆಸ್ ನಡುವೆ ಮಾತಿನ ಸಮರ ನಡೆದಿದ್ದು ಈ ಕುರಿತು ಹೇಳಿಕೆ ನೀಡಿದ್ದ ಶೋಭಾ ಕರಂದ್ಲಾಜೆ, ದಲಿತರು ಬಿಜೆಪಿ ಕಡೆ ವಾಲುತ್ತಿರುವುದಕ್ಕೆ ಹತಾಶೆಗೊಂಡು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಾಮರಸ್ಯ ಮೂಡಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ದಲಿತರ ಪರವಾದ ಬಿಜೆಪಿ ನಡೆಯನ್ನು ಪ್ರಶ್ನಿಸುವ ಬದಲು ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ಹಾಗೂ ಕಾರ್ಯಕಾರಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದಲಿತರ ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದಾರಾ ಎಂಬ ಬಗ್ಗೆ ಮೊದಲು ಉತ್ತರಿಸಬೇಕು. ನಮ್ಮನ್ನು ಕೇಳುವುದಲ್ಲ ಎಂದಿದ್ದರು.

 

Comments

Leave a Reply

Your email address will not be published. Required fields are marked *