ಶ್ರೀನಗರ: ಕಲ್ಲು ತೂರಾಟ ನಡೆಸುತ್ತಿದ್ದ ಯುವಕನನ್ನು ಜೀಪಿಗೆ ಕಟ್ಟಿದ್ದು ಯಾಕೆ ಎನ್ನುವುದನ್ನು ಮೇಜರ್ ಲೀತುಲ್ ಗೊಗೊಯ್ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉಪಚುನಾವಣೆಯ ಸೇವೆಯ ವೇಳೆ ವಾಹನವನ್ನು ಉತ್ಲಿಗಾಮ್ ಎಂಬಲ್ಲಿ ನೂರಾರು ಮಂದಿ ಸುತ್ತುವರೆದು ಕಲ್ಲು ತೂರಾಟ ಮಾಡುತ್ತಿದ್ದರು. ಚುನಾವಣಾ ಸಿಬ್ಬಂದಿ ಸಹಿತ 12 ಮಂದಿಯ ಜೀವ ಉಳಿಸಿಬೇಕಾದ ಜವಾಬ್ದಾರಿ ಇತ್ತು. ಹೀಗಾಗಿ ಬುಲೆಟ್ ಪ್ರಯೋಗಿಸದೇ ಎಲ್ಲರ ಜೀವ ಉಳಿಸಲು ಯುವಕನನ್ನು ವಾಹನಕ್ಕೆ ಕಟ್ಟಿ ಹಾಕಲಾಯಿತು ಎಂದು ಹೇಳಿದರು.
ನಮ್ಮ ಸುತ್ತಮುತ್ತಲು ಕಲ್ಲು ತೂರಾಟ ನಡೆಯುತ್ತಿದ್ದರೂ ನಾವು ಯಾರಿಗೂ ಹೆದರಲಿಲ್ಲ. ಶಾಂತ ರೀತಿಯಲ್ಲಿ ಚುನಾವಣೆ ನಡೆಸಲು ನಾನು ಆ ನಿರ್ಧಾರವನ್ನು ತೆಗೆದುಕೊಂಡೆ. ಯಾವುದೇ ಬುಲೆಟ್ ಪ್ರಯೋಗಿಸದೇ ಅಲ್ಲಿದ್ದವರ ಜೀವವನ್ನು ಉಳಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಂಡೆ ಎಂದು ತಿಳಿಸಿದರು.
ಯುವಕ ಅಮಾಯಕ, ಮಾನವ ಹಕ್ಕು ಉಲ್ಲಂಘನೆಯ ಆರೋಪ ಕೇಳಿಬಂದಿತ್ತು. ಆದರೆ ಯುವಕ ಅಮಾಯಕ ಅಲ್ಲ, ಆತ ಗುಂಪಿನಲ್ಲಿ ಕಲ್ಲು ಎಸೆಯುತ್ತಿದ್ದ ಅಂತ ಮೇಜರ್ ಗೊಗೊಯ್ ಹೇಳಿದರು.
ಲೀತುಲ್ ಗೊಗೊಯ್ ಯಾರು?
ಅಸ್ಸಾಂನ ಗುವಾಹಟಿಯವರಾದ ಲೀತುಲ್ ಗೊಗೊಯ್ ಯುಪಿಎಸ್ಸಿ ಎನ್ಡಿಎ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿದ್ದಾರೆ. ಡೆಹ್ರಾಡೂನ್ ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದು 2013ರಲ್ಲಿ ಅಧಿಕಾರಿಯಾಗಿ ಗೊಗೊಯ್ ಸೇನೆಗೆ ಸೇರ್ಪಡೆಯಾಗಿದ್ದಾರೆ.
ಏನಿದು ಪ್ರಕರಣ?
ಏಪ್ರಿಲ್ 9ರಂದು ಕಾಶ್ಮೀರದಲ್ಲಿ ಸೈನಿಕರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆಯನ್ನು ತಡೆಯುವ ಸಲುವಾಗಿ ಕಲ್ಲು ತೂರಾಟ ನಡೆಸುವವರನ್ನೇ ಭಾರತೀಯ ಸೈನಿಕರು ಜೀಪ್ ಗೆ ಬಿಗಿದು ಚಾಲನೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಕುರಿತು ಸೇನೆ ತನಿಖೆಗೆ ಆದೇಶಿಸಿತ್ತು. ಯುವಕನನ್ನು ಜೀಪ್ ಗೆ ಕಟ್ಟಿ ಮೆರವಣಿಗೆ ಮಾಡಿದ್ದ ಗೊಗೊಯ್ ಅವರ ವಿರುದ್ಧ ಪೊಲೀಸರು ಎಫ್ಐಆರ್ ಸಹ ದಾಖಲಿಸಿದ್ದಾರೆ. ಲೀತುಲ್ ಗೊಗೊಯ್ ಅವರ ಈ ಕಾರ್ಯವನ್ನು ಮೆಚ್ಚಿ ಸೇನೆಯ ಜನರಲ್ ಬಿಪಿನ್ ರಾವತ್ ಪ್ರಶಸ್ತಿ ಪತ್ರ ಕೊಟ್ಟು ಸನ್ಮಾನಿಸಿದ್ದಾರೆ. ಮೇಜರ್ಗೆ ಸನ್ಮಾನ ಮಾಡಿದ್ದಕ್ಕೆ ಪಾಕ್ ಮಾಧ್ಯಮಗಳು ಇದನ್ನು ಶೇಮ್ಫುಲ್ ಅವಾರ್ಡ್ ಎಂದು ಟೀಕೆ ಮಾಡಿದೆ.
ಇದನ್ನೂ ಓದಿ: ಭಾರತೀಯ ಸೇನೆಯಿಂದ ಪಾಕ್ ಬಂಕರ್ ಉಡೀಸ್.. ವಿಡಿಯೋ ನೋಡಿ
https://www.youtube.com/watch?v=IoFRCMH6Z4E



Leave a Reply