ಮದುವೆ ಮಂಟಪದ ಗೋಡೆ ಕುಸಿದು 26 ಮಂದಿ ದುರ್ಮರಣ

ಜೈಪುರ: ಭಾರೀ ಮಳೆ ಹಾಗೂ ಚಂಡಮಾರುತದಿಂದಾಗಿ ಮದುವೆ ಮಂಟಪದ ಗೋಡೆ ಕುಸಿದು 26 ಮಂದಿ ದಾರುಣವಾಗಿ ಸಾವನ್ನಪ್ಪಿರೋ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಇಲ್ಲಿನ ಭರತ್‍ಪುರ ಜಿಲ್ಲೆಯ ಸೆವರ್ ರೋಡ್‍ನ ಅನ್ನಪೂರ್ಣ ಮ್ಯಾರೇಜ್ ಹೋಮ್‍ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ, ಘಟನೆಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ 26 ಮಂದಿ ಸಾವನ್ನಪ್ಪಿದ್ದು, 28 ಮಂದಿಗೆ ಗಂಭೀರ ಗಾಯಗಳಾಗಿದೆ.

ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದಾಗ ಈ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಚಂಡಮಾರುತ ಅಪ್ಪಳಿಸಿದೆ. ಮಳೆಯಿಂದಾಗಿ ಕೆಲವರು ಮಂಟಪದ ಪಕ್ಕದಲ್ಲಿದ್ದ ಶೆಡ್‍ನಲ್ಲಿ ಆಶ್ರಯ ಪಡೆದಿದ್ದಾರೆ. ಈ ವೇಳೆ ಮಂಟಪದ ಗೋಡೆ ಇದ್ದಕ್ಕಿದ್ದಂತೆ ಶೆಡ್ ಮೇಲೆ ಕುಸಿದು ಬಿದ್ದಿದ್ದು, 26 ಮಂದಿಯನ್ನ ಬಲಿ ಪಡೆದಿದೆ. ಮೃತಪಟ್ಟವರಲ್ಲಿ 11 ಮಂದಿ ಪುರುಷರು, ಏಳು ಮಂದಿ ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಟಪದ ಗೋಡೆ ಸುಮಾರು 90 ಅಡಿ ಉದ್ದ ಹಾಗೂ 12-13 ಅಡಿ ಎತ್ತರವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹವಾಮಾನ ಇದ್ದಕ್ಕಿದ್ದಂತೆ ಬದಲಾಗಿ ಬಿರುಗಾಳಿ ಶುರುವಾಗಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ದುರಂತಕ್ಕೆ ಮುಖ್ಯಮಂತ್ರಿ ವಸುಂಧರಾ ರಾಜೆ ವಿಷಾದ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *