ನನ್ನ ಸಾವಿಗೆ ಇವ್ರೇ ಕಾರಣ- ಕೈ ಮೇಲೆ ಹೆಸರು ಬರೆದು ಮಹಿಳೆ ಆತ್ಮಹತ್ಯೆಗೆ ಶರಣು

ತುಮಕೂರು: ಮಹಿಳೆಯೋರ್ವರು ಗಂಡ ಸೇರಿದಂತೆ ತನ್ನ ಅತ್ತೆ ಮನೆಯ ಕುಟುಂಬಸ್ಥರ ಹೆಸರನ್ನು ಕೈ ಮೇಲೆ ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧುಗಿರಿ ಪಟ್ಟಣದ ರಾಘವೆಂದ್ರ ಬಡಾವಣೆಯಲ್ಲಿ ನಡೆದಿದೆ.

24 ವರ್ಷದ ಹರ್ಷಿತಾ ಮೃತ ದುರ್ದೈವಿ. ಮಧುಗಿರಿ ಪಟ್ಟಣದ ರಾಘವೇಂದ್ರ ಬಡಾವಣೆಯ ತನ್ನ ತವರು ಮನೆಯಲ್ಲಿ 24 ವರ್ಷದ ಹರ್ಷಿತಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹರ್ಷಿತಾ ಅವರನ್ನ ಚಿತ್ರದುರ್ಗ ಮೂಲದ ಮುರುಳೀಧರ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಸದ್ಯ ತುಮಕೂರು ಸಾರಿಗೆ ಸಂಸ್ಥೆಯ ಡಿಪೋದಲ್ಲಿ ಮೆಕ್ಯನಿಕ್ ಆಗಿ ಕೆಲಸ ನಿರ್ವಹಿಸುತಿದ್ದ ಮುರುಳೀಧರ್ ಪದೇ ಪದೇ ವರದಕ್ಷಿಣೆ ತರುವಂತೆ ಪೀಡಿಸುತಿದ್ದ ಎನ್ನಲಾಗಿದೆ. ಹಣ ತರದೇ ಇದ್ದಾಗ ಹರ್ಷಿತಾರನ್ನ ವಂಚಿಸಿ ಮೋಸದಿಂದ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾನೆ ಎನ್ನಲಾಗಿದೆ.

ಶುಕ್ರವಾರದಂದು ಹರ್ಷಿತಾ ಹಾಗೂ ಮುರುಳೀಧರ್‍ಗೆ ಕೋರ್ಟ್ ವಿಚ್ಛೇದನ ನೀಡಿದೆ. ವರದಕ್ಷಿಣೆ ಕಿರುಕುಳ ಹಾಗೂ ವಿಚ್ಛೇದನದ ಕಾರಣದಿಂದ ಹರ್ಷಿತಾ ತನ್ನ ಗಂಡ ಮುರುಳಿಧರ್, ಅತ್ತೆ ಮಂಜುಳಾ, ಮಾವ ವಿಠ್ಠಲ್, ಭಾವ ಸಂತೋಷ್ ಸೇರಿದಂತೆ ಒಟ್ಟು 7 ಜನರ ಹೆಸರನ್ನು ಕೈಯಲ್ಲಿ ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *