SSLCಯಲ್ಲಿ ಫೇಲ್ ಆಗ್ತಾರೆ ಅನ್ನೋ ಕಾರಣಕ್ಕೆ ವಿದ್ಯಾರ್ಥಿಗಳು ಶಾಲೆಯಿಂದಲೇ ಔಟ್!

ಹುಬ್ಬಳ್ಳಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಫೇಲ್ ಆಗ್ತಾರೆ ಎನ್ನುವ ಕಾರಣಕ್ಕೆ ಹಿಂದುಳಿದ ವಿದ್ಯಾರ್ಥಿಗಳನ್ನು ನಗರದ ಶಾಲೆಯೊಂದು ಹೊರಹಾಕಿದೆ.

ನಗರದ ಕೇಶ್ವಾಪುರ ರಸ್ತೆ ಕಾನ್ವೆಂಟ್ ಹೈ ಸ್ಕೂಲ್ ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದೆ. ಒಂದನೇ ತರಗತಿಯಿಂದ 9ನೇ ತರಗತಿಯ ವರೆಗೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿರುವ 15 ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆ.

ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳು ಮುಂದಿನ ವರ್ಷ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳುತ್ತಾರೆ. ಫೇಲ್ ಆದ ಮೇಲೆ ಆತ್ಮಹತ್ಯೆ ಮಾಡಿಕೊಂಡು ಶಾಲೆಗೆ ಕೆಟ್ಟ ಹೆಸರು ತರುತ್ತಾರೆ ಎಂಬ ದುರುದ್ದೇಶದಿಂದ ನಮ್ಮ ಮಕ್ಕಳನ್ನು ಶಾಲೆಯಿಂದ ಹೊರಹಾಕಿದ್ದಾರೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ಇನ್ನು ಈ ಮಕ್ಕಳು ಮಾನಸಿಕವಾಗಿ ಅಸಮರ್ಥರು, ಬರೆಯಲು ಮತ್ತು ಓದವ ಸಾಮರ್ಥ್ಯ ಕಡಿಮೆಯಿದೆ. ಇವರಿಗೆ ಹತ್ತನೇ ತರಗತಿಗೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಹೀಗಾಗಿ ಅವರಿಗೆ ವಿಶೇಷ ಅನಮತಿ ಬೇಕು ಎಂದು ಶಾಲೆಯ ಹೆಡ್ ಮಿಸ್ ಲೀನಾ ಬೆಂಗಳೂರಿನ ಮಾನಸಿಕ ಪರೀಕ್ಷೆ ಸಂಸ್ಥೆಗೆ ಪತ್ರ ಬರೆದಿದ್ದಾರೆ.

ಶಾಲೆಯ ಹೆಡ್ ಮಿಸ್ ಲೀನಾ

ಈ ರೀತಿಯ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸರ್ಕಾರ 10 ನೇ ತರಗತಿ ಪರೀಕ್ಷೆ ಬರೆಯಲು ವಿಶೇಷ ಅನುಮತಿ ನೀಡುತ್ತದೆ. ಹೀಗಾಗಿ ಈ ಮಕ್ಕಳಿಗೆ ನಮ್ಮ ಶಾಲೆಯ ಬೋರ್ಡ್ ನಿಂದ ಪರೀಕ್ಷೆ ಬರೆಯಲು ಅವಕಾಶ ನಿಡೋದಿಲ್ಲ. ಬೇರೆ ಶಾಲೆಯಿಂದ ಅಥವಾ ಓಪನ್ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿ ಎಂದು ಲೀನಾ ಹೇಳಿದ್ದಾರೆ.

ಮಕ್ಕಳನ್ನು ತಿದ್ದಿ ಬುದ್ಧಿ ಹೇಳಿ ಒಳ್ಳೆಯ ಜ್ಞಾನವಂತರನ್ನಾಗಿ ಮಾಡಬೇಕಾದ ವಿದ್ಯಾ ಸಂಸ್ಥೆ ಮಕ್ಕಳು ಬುದ್ಧಿವಂತರಲ್ಲ ಎನ್ನುವ ಕಾರಣಕ್ಕೆ ಶಾಲೆಯಿಂದಲೇ ಹೊರ ಹಾಕಲು ಹೊರಟಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *