ಧಾರವಾಡದಲ್ಲಿ ತಾಯಂದಿರಿಂದಲೇ ಮಕ್ಕಳ ಕಿಡ್ನ್ಯಾಪ್‌ – ತಾಯಂದಿರು, ಅವರ ಪ್ರೇಮಿಗಳು ಅರೆಸ್ಟ್‌

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ತಾಯಂದಿರಿಂದಲೇ‌ ಸ್ವಂತ ಮಕ್ಕಳ ಕಿಡ್ನ್ಯಾಪ್ ಪ್ರಕರಣ ನಡೆದಿದೆ. ಅಣ್ಣ-ತಮ್ಮಂದಿರ ಹೆಂಡತಿಯರಿಂದಲೇ ಈ ಕೃತ್ಯ ನಡೆದಿದ್ದು, ತಮ್ಮಿಬ್ಬರ ಪ್ರಿಯಕರರೊಂದಿಗೆ ಸೇರಿ ತಮ್ಮದೇ ಆರು ಮಕ್ಕಳ ಕಿಡ್ನ್ಯಾಪ್ ಮಾಡಿದ್ದಾರೆ.

ಅಪಹರಣ ಕೇಸ್ ಬೇಧಿಸಿ ಆರು ಮಕ್ಕಳನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ನ. 7ರಿಂದ ಇಬ್ಬರು ತಾಯಂದಿರು ಹಾಗೂ ಆರು ಮಕ್ಕಳು ನಾಪತ್ತೆಯಾಗಿದ್ದರು. ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸುವುದಾಗಿ ಕರೆದುಕೊಂಡು ಹೋಗಿದ್ದ ತಾಯಂದಿರು, ನಂತರ ಪತ್ತೇನೇ ಇರಲಿಲ್ಲ.‌ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾದ ಮೇಲೆ ಮಕ್ಕಳ ತಾಯಂದಿರಿಗಾಗಿ ಹುಡುಕಾಟ ನಡೆದಿತ್ತು. ಇವರಿಬ್ಬರು ಮುತ್ತುರಾಜ್ ಮತ್ತು ಸುನಿಲ ಎಂಬವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಇದಾದ ನಂತರ ಫೋನ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಪೊಲೀಸರು ಆಯಕ್ತ ಮಾಹಿತಿ‌ ನೀಡಿದ್ದಾರೆ.

ಮಕ್ಕಳು ಬೇಕಾದರೆ ಹತ್ತು ಲಕ್ಷ ಕೊಡಿ, ಹಣ ಕೊಡದಿದ್ದರೇ ಮಕ್ಕಳನ್ನು ಎಲ್ಲಿಯಾದರೂ ಬಿಟ್ಟು ನೇಪಾಳಕ್ಕೆ ಹೋಗೋದಾಗಿ ಹೇಳಿದ್ದರು. ಇದರಿಂದ ಪೊಲೀಸರು ಹೈದರಾಬಾದ್, ಮಹಾರಾಷ್ಟ್ರ, ಬೆಂಗಳೂರಿನಲ್ಲಿ ಮಕ್ಕಳಿಗಾಗಿ ಹುಡುಕಾಟ ನಡೆಸಿ, ಕೊನೆಗೆ ಬೆಂಗಳೂರಿನಲ್ಲಿ‌ ಮಕ್ಕಳ ಸಮೇತ ತಾಯಂದಿರನ್ನು ಪತ್ತೆ ಮಾಡಿದ್ದಾರೆ‌. ತಾಯಂದಿರ ಜೊತೆಗೆ ಇಬ್ಬರೂ ಪ್ರಿಯಕರರನ್ನು ಪತ್ತೆ ಮಾಡಲಾಗಿದ್ದು, ನಾಲ್ವರನ್ನೂ ಬಂಧಿಸಿದ್ದಾರೆ‌.