ಹಂದಿ ಕಳ್ಳತನಕ್ಕೆ ಹೋದವರ ಬೊಲೆರೋ ಪಲ್ಟಿ – ಇಬ್ಬರ ಸಾವು

– ರಾಯಚೂರಿನಲ್ಲಿ ಪ್ರತ್ಯೇಕ ಅಪಘಾತಗಳಲ್ಲಿ ಮೂವರ ಸಾವು

– ಅಕ್ರಮ ಮರಳುಗಾರಿಕೆಯ ಟ್ರ್ಯಾಕ್ಟರ್ ಪಲ್ಟಿ – ಚಾಲಕ ಬಲಿ

ರಾಯಚೂರು: ರಾಯಚೂರಿನಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮಾನ್ವಿ ತಾಲೂಕಿನ ಅರೋಲಿ ಬಳಿ ಬೊಲೆರೋ ಪಲ್ಟಿಯಾಗಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾನೆ.

ಕೊಪ್ಪಳ ಜಿಲ್ಲೆಯ ಹನುಮನಾಳದ 24 ವರ್ಷದ ಶಿವು, ಸಿಂಧನೂರು ತಾಲೂಕಿನ ರೌಡಕುಂದ ಗ್ರಾಮದ 25 ವರ್ಷದ ಪರಶುರಾಮ್ ಮೃತ ದುರ್ದೈವಿಗಳು. ವಾಹನದಲ್ಲಿದ್ದ ಇನ್ನೋರ್ವನಿಗೆ ಗಂಭೀರ ಗಾಯಗಳಾಗಿದ್ದು ಮಾನ್ವಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಹಂದಿ ಕಳ್ಳತನಕ್ಕೆ ಹೊಂಚು ಹಾಕಿ ರಾತ್ರಿ ವೇಳೆ ತಿರುಗುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು ತಾಲೂಕಿನ ಮಿರ್ಜಾಪುರದಲ್ಲಿ ಮರಳು ಸಾಗಣೆ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 18 ವರ್ಷದ ಪ್ರಾಣೇಶ್ ಮೃತ ಚಾಲಕ. ಮಿರ್ಜಾಪುರ ಹಳ್ಳದಿಂದ ಅಕ್ರಮವಾಗಿ ಮರಳು ಸಾಗಿಸುವ ವೇಳೆ ಘಟನೆ ನಡೆದಿದೆ. ಚಾಲನೆ ಸರಿಯಾಗಿ ಬಾರದ ಪ್ರಾಣೇಶ್ ದಿಬ್ಬ ಏರಿಸಲು ಹೋದಾಗ ಟ್ರ್ಯಾಕ್ಟರ್ ಹಿಂದಕ್ಕೆ ಪಲ್ಟಿ ಹೊಡೆದಿದೆ. ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *