ಗುರುಪ್ರಸಾದ್-ಧನಂಜಯ್ ನಡುವಿನ ಗುದ್ದಾಟಕ್ಕೆ ಇದೇ ಕಾರಣ

ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ನಿರ್ದೇಶಕ ಗುರುಪ್ರಸಾದ್ ಅವರು ಸುಮ್ಮನೇ ಕೂರುವಂತೆ ಕಾಣುತ್ತಿಲ್ಲ. ಇತ್ತೀಚಿಗೆ ಗುರುಪ್ರಸಾದ್ ಚಿತ್ರದ ಪ್ರಮೋಷನ್ ನೆಪದಲ್ಲಿ ಫೇಸ್‍ಬುಕ್ ಲೈವ್ ಚಾಟ್‍ನಲ್ಲಿ ಎರಡನೇ ಸಲ ಚಿತ್ರದ ನಾಯಕ ಧನಂಜಯ್ ವಿರುದ್ಧ ಗುಡುಗಿದ್ದಾರೆ.

ಇಷ್ಟುದಿನ `ಎರಡನೇ ಸಲ’ ಚಿತ್ರದ ನಿರ್ಮಾಪಕ ಯೋಗೇಶ್ ನಾರಾಯಣ್ ಮತ್ತು ನಿರ್ದೇಶಕ ಗುರುಪ್ರಸಾದ್ ನಡುವೆ ವೈಮನಸ್ಸು ಉಂಟಾಗಿತ್ತು. ಯೋಗೇಶ್‍ಗೌಡ ಅವರು ಗುರುಪ್ರಸಾದ್ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದ್ದರು. ಕೊನೆಗೆ ಫಿಲ್ಮ್ ಛೇಂಬರ್ ಇಬ್ಬರನ್ನು ಕರೆಸಿ ಬುದ್ದಿವಾದ ಹೇಳಿತ್ತು. ಗುರುಪ್ರಸಾದ್ ಚಿತ್ರದ ಪ್ರಮೋಷನ್‍ಗೆ ಬರುತ್ತೇನೆ ಎಂದು ಫಿಲ್ಮ್ ಛೇಂಬರ್‍ನಲ್ಲಿ ಒಪ್ಪಿಕೊಂಡಿದ್ದರು.

ಫಿಲ್ಮ್ ಛೇಂಬರ್‍ನಲ್ಲಿ ಕೊಟ್ಟ ಮಾತಿನಂತೆ ಗುರುಪ್ರಸಾದ್ ಚಿತ್ರದ ಪ್ರಚಾರಕ್ಕಾಗಿ ಅಭಿಮಾನಿಗಳ ಜೊತೆ ಫೇಸ್‍ಬುಕ್ ನಲ್ಲಿ ಲೈವ್ ಚಾಟ್‍ಗೆ ಇಳಿದಿದ್ದರು. ಚಾಟ್‍ನಲ್ಲಿ ಯೋಗೇಶ್‍ಗೌಡರ ವಿರುದ್ಧ ಗುಡುಗಬಹುದು ಅಂದುಕೊಂಡಿದ್ದ ಅಭಿಮಾನಿಗಳು ಆಶ್ಚರ್ಯಗೊಂಡಿದ್ದರು. ಗುರುಪ್ರಸಾದ್ ತಮ್ಮ ಶಿಷ್ಯ, ನಟ ಧನಂಜಯ್ ವಿರುದ್ಧ ಗುಡುಗಿದ್ದಾರೆ.

ಧನಂಜಯ್ ನನಗೆ ಗುರು ದ್ರೋಹ ಮಾಡಿದ್ದಾನೆ. ಅವನಿಗೆ ಆಕ್ಟಿಂಗ್ ಹೇಳಿಕೊಟ್ಟಿದ್ದೇ ನಾನು. ಈಗ ನನ್ನನ್ನೇ ಏಕವಚದಲ್ಲಿ ಗುರು ಎಂದು ಕರೆಯುತ್ತಾನೆ. ಇವನನ್ನು ಗೊಡ್ಡ ಹಸು ಎನ್ನುತ್ತಾರೆ. ಇವನನ್ನು ಹಾಕ್ಕೊಂಡು ಸಿನಿಮಾ ಮಾಡಿರುವ ನಿರ್ಮಾಪಕರೆಲ್ಲ ಲಾಸ್ ಆಗಿದ್ದಾರೆ ಎಂದು ಗುರುಪ್ರಸಾದ್ ಆರೋಪ ಮಾಡಿದ್ದಾರೆ.

ಗುರುಪ್ರಸಾದ್ ಆರೋಪಕ್ಕೆ ಪ್ರತಿಕ್ರಿಯಿಸಿದ ಧನಂಜಯ್, ನಾನು ಎಂದಿಗೂ ಗುರುದ್ರೋಹ ಮಾಡಿಲ್ಲ. ತಾನು ಬೆಳೆದ ಸಂಸ್ಕøತಿ ಎಂತಹದ್ದು..! ನನಗೆ ನಟನೆ ಹೇಳಿಕೊಟ್ಟಿದ್ಯಾರು..? ಎಲ್ಲದ್ದಕ್ಕೂ ಉತ್ತರಿಸಿದ್ರು. ಜೊತೆಗೆ ನನ್ನ ಚಿತ್ರದ ಪ್ರೊಡ್ಯೂಸರ್‍ಗಳ ಬಗ್ಗೆ ಮಾತನಾಡುತ್ತಿದ್ದಿರಲ್ಲ. ಈಗ ನೀವು ಮಾಡಿದ ಮೂರು ಸಿನಿಮಾದ ಪ್ರೊಡ್ಯೂಸರಗಳನ್ನ ನಾ ಬಲ್ಲೆ ಎಂದು ಗುರುವಿಗೆ ತಿರುಗೇಟು ನೀಡಿದರು.

`ಎರಡನೇ ಸಲ’ ಸಿನಿಮಾದ ಪ್ರಚಾರಕ್ಕೆ ಧನಂಜಯ್ ಹೋಗಿರುವುದೇ ಗುರುಪ್ರಸಾದ್ ಕೋಪ ತರಿಸಲು ಕಾರಣವಂತೆ. ಚಿತ್ರದ ಕಲಾವಿಧರಿಗೆ ನೀವ್ಯಾರೂ ಪ್ರಚಾರಕ್ಕೆ ಹೋಗಬೇಡಿ ಸಿನಿಮಾ ಹಾಳಾಗ್ ಹೋಗಲಿ ಎಂದು ನಿರ್ದೇಶಕ ಗುರುಪ್ರಸಾದ್ ಹೇಳಿದ್ದರು ಎಂಬ ಗಾಳಿಸುದ್ದಿ ಗಾಂಧಿನಗರದಲ್ಲಿ ಈಗ ಹರಿದಾಡುತ್ತಿದೆ.

 

 

Comments

Leave a Reply

Your email address will not be published. Required fields are marked *