ಅಳಿಯನ ಕಿರುಕುಳಕ್ಕೆ ಬೇಸತ್ತು ಅತ್ತೆ ಆತ್ಮಹತ್ಯೆ!

ಮೈಸೂರು: ಅಳಿಯನ ಕಿರುಕುಳದಿಂದ ಮನನೊಂದ ಅತ್ತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಬಸವೇಶ್ವರ ರಸ್ತೆಯಲ್ಲಿ ನಡೆದಿದೆ.

50 ವರ್ಷದ ರಾಜೇಶ್ವರಿ ಮೃತ ದುರ್ದೈವಿ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅಲಗೂಡು ಗ್ರಾಮದ ರವಿಕುಮಾರ್‍ಗೆ ಮಗಳು ಸೌಮ್ಯಶ್ರೀಯನ್ನ ಕೊಟ್ಟು ಮದುವೆ ಮಾಡಲಾಗಿತ್ತು. 4 ತಿಂಗಳ ಕಾಲ ಅನ್ಯೂನ್ಯವಾಗಿಯೇ ಸಂಸಾರ ನಡೆಸಿದ್ದ ರವಿಕುಮಾರ್ ಬಳಿಕ ವರದಕ್ಷಿಣೆಗಾಗಿ ಪತ್ನಿ ಸೌಮ್ಯಶ್ರೀಯನ್ನ ತವರು ಮನೆಗೆ ಕಳುಹಿಸಿದ್ದ. ಕೊನೆಗೆ ನ್ಯಾಯಾಲಯದ ಆದೇಶದಂತೆ ಸೌಮ್ಯಶ್ರೀ ಗಂಡನ ಮನೆಗೆ ಸೇರಿದ್ದರು.

ಆದರೆ ಮತ್ತೆ ವರದಕ್ಷಿಣೆಗಾಗಿ ಅಳಿಯ ರವಿಕುಮಾರ್ ಪತ್ನಿ ಸೌಮ್ಯಶ್ರೀಯನ್ನ ತವರು ಮನೆಗೆ ಕಳುಹಿಸಿದ್ದ. ಈ ಬಗ್ಗೆ ಸೌಮ್ಯಶ್ರೀ ತಾಯಿ ರಾಜೇಶ್ವರಿ ಅಳಿಯನಿಗೆ ಮೊಬೈಲ್‍ನಲ್ಲಿ ಬುದ್ಧಿವಾದ ಹೇಳಿದ್ರು. ಆದ್ರೆ ಇದನ್ನ ರೆಕಾರ್ಡ್ ಮಾಡಿಕೊಂಡಿದ್ದ ಅಳಿಯ ರವಿಕುಮಾರ್ ಬೆದರಿಕೆ ಹಾಕಿದ್ದಾಗಿ ಅತ್ತೆ ವಿರುದ್ಧ ಅರಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದ. ಅಲ್ಲದೆ ಅತ್ತೆ ರಾಜೇಶ್ವರಿಗೆ ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ರಾಜೇಶ್ವರಿ ಗುರುವಾರ ರಾತ್ರಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *