ಬಾವನನ್ನು ಗೆಲ್ಲಿಸಲು ಪಣ – ಬೆಂಗಳೂರು ಗ್ರಾಮಾಂತರವನ್ನು ಪ್ರತಿಷ್ಠೆಯಾಗಿ ಹೆಚ್‌ಡಿಕೆ ತೆಗೆದುಕೊಂಡಿದ್ದು ಯಾಕೆ?

ಬೆಂಗಳೂರು: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಬೆಂಗಳೂರು ಗ್ರಾಮಾಂತರ (Bengaluru Rural) ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು , ಈ ಬಾರಿ ಇಲ್ಲಿ ಡಾ. ಮಂಜುನಾಥ್‌ (Dr. Manjunath) ಅವರನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ.

ಹೌದು. 2019ರ ಚುನಾವಣೆಯಲ್ಲಿ ಡಿಕೆ ಸುರೇಶ್‌ (DK Suresh) ಒಬ್ಬರೇ ಕರ್ನಾಟಕದಿಂದ ಕಾಂಗ್ರೆಸ್‌ (Congress) ಸಂಸದರಾಗಿ ಆಯ್ಕೆ ಆಗಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ನಡೆದ ಪರಿಣಾಮ ಡಿಕೆ ಸುರೇಶ್‌ 2.06 ಲಕ್ಷ ಮತಗಳಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಜೆಡಿಎಸ್‌ ಮತಗಳು ಸುರೇಶ್‌ ಅವರಿಗೆ ಬಿದ್ದ ಕಾರಣ ಲೀಡ್‌ ಹೆಚ್ಚಾಗಿದೆ. ಹೀಗಾಗಿ ಈ ಬಾರಿ ಇವರನ್ನು ಸೋಲಿಸಲೇಬೇಕೆಂದು ಹೆಚ್‌ಡಿಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಯಾಕೆ?
ಬಾವಾ ಡಾ. ಮಂಜುನಾಥ್ ಅವರನ್ನು ಚುನಾವಣೆಗೆ ನಿಲ್ಲಿಸಲು ಒಪ್ಪಿಸಿದ್ದೇ ಕುಮಾರಸ್ವಾಮಿ. ಒಂದು ವೇಳೆ ಫಲಿತಾಂಶ ವ್ಯತಿರಿಕ್ತವಾಗಿ ಬಂದರೆ ಕುಮಾರಸ್ವಾಮಿ ಮೇಲೆ ಆರೋಪಗಳು ಹೆಚ್ಚಾಗುತ್ತದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಅಲ್‌ ಜಜೀರಾ ನಿಷೇಧ – ಇದು ಉಗ್ರರ ವಾಹಿನಿ ಎಂದ ನೆತನ್ಯಾಹು

ಮಂಜುನಾಥ್ ಅವರ ಚುನಾವಣೆ ಸ್ಪರ್ಧೆಗೆ ಅವರ ಪತ್ನಿ ಅನಸೂಯ ಮತ್ತು ಪುತ್ರ ಅಲ್ಲದೇ ಮಾಜಿ ಪ್ರಧಾನಿ ದೇವೇಗೌಡರ ವಿರೋಧ ಇತ್ತು. ಮಾತುಕತೆಯ ವೇಳೆ ಬಾವನನ್ನು ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ ಎಂದು ಹೆಚ್‌ಡಿಕೆ ಮನವೊಲಿಕೆ ಮಾಡಿದ್ದರು. ಕುಮಾರಸ್ವಾಮಿ ಮಾತಿಗೆ ಒಪ್ಪಿ ಬಿಜೆಪಿಯಿಂದ ಸ್ಪರ್ಧೆಗೆ ಸಹೋದರಿ ಒಪ್ಪಿಗೆ ನೀಡಿದ್ದಾರೆ. ಈಗ ಹೆಚ್‌ಡಿಕೆ ಕೊಟ್ಟ ಮಾತು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಡಿಕೆ ಶಿವಕುಮಾರ್‌, ಡಿಕೆ ಸುರೇಶ್‌ ಚುನಾವಣೆ ಗೆಲ್ಲಲು ದೊಡ್ಡ ದೊಡ್ಡ ತಂತ್ರಗಾರಿಕೆ ಮಾಡುತ್ತಾರೆ. ರಾಜಕೀಯದಲ್ಲಿ ಅನುಭವ ಇಲ್ಲದ ಡಾ. ಮಂಜುನಾಥ್ ಅವರಿಗೆ ಇದನ್ನು ಸಹಿಸುವುದು ಕಷ್ಟ. ಹೀಗಾಗಿ ಕುಮಾರಸ್ವಾಮಿ ಬೆಂಗಾವಲು ನಿಂತು ಕೆಲಸ ಮಾಡಲು ಮುಂದಾಗಿದ್ದಾರೆ. ಒಂದು ವೇಳೆ ಡಾ.ಮಂಜುನಾಥ್ ಫಲಿತಾಂಶ ವ್ಯತಿರಿಕ್ತವಾದರೆ ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬ ಇಮೇಜ್‌ಗೂ ಧಕ್ಕೆ ಬೀಳುವ ಆತಂಕವಿದೆ.  ಇದನ್ನೂ ಓದಿ: ಮುಂದಿನ 3 ತಿಂಗಳು ಕಾಡಲಿದೆ ರಣಬಿಸಿಲು – ಉತ್ತರ ಒಳನಾಡಿಗೆ ಉಷ್ಣಗಾಳಿಯ ಕೆಟ್ಟ ಪರಿಣಾಮ

ಗೆದ್ದರೆ ಹ್ಯಾಟ್ರಿಕ್‌ ಸಾಧನೆ:
2014, 2019ರ ಚುನಾವಣೆಗಳಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿರುವ ಡಿ.ಕೆ ಸುರೇಶ್‌ ಇದೀಗ ಹ್ಯಾಟ್ರಿಕ್‌ ಗೆಲುವಿನ ವಿಶ್ವಾಸದಲ್ಲಿದ್ದಾರೆ. 2014ರಲ್ಲಿ ಡಿಕೆ ಸುರೇಶ್‌ 14,55,244 ಮತಗಳನ್ನು ಪಡೆದು, 2,31,480 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2019ರಲ್ಲಿ 2,06,870 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹಾಗಾಗಿ ಹೈಕಮಾಂಡ್‌ ಸತತ 3ನೇ ಬಾರಿಗೆ ಬೆಂಗಳೂರು ಗ್ರಾಮಾಂತರದ ಟಿಕೆಟ್‌ ನೀಡಿದೆ.