ಹೂಡಿಯ ಪ್ರಾರ್ಥನಾ ಮಂದಿರದ ಬಳಿ ಬಟ್ಟೆ ಬದಲಾಯಿಸಿ ಟೋಪಿ ಬಿಟ್ಟು ಹೋದ ಬಾಂಬರ್‌

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ಬಾಂಬ್‌ ಇಟ್ಟ ಆರೋಪಿ ಹೂಡಿಯ ಬಳಿಯ ಪ್ರಾರ್ಥನಾ  ಮಂದಿರದ ಬಳಿ ಬಟ್ಟೆ ಬದಲಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ.

ಬಿಎಂಟಿಸಿ ಬಸ್ಸಿನಲ್ಲಿ (BMTC) ಹೊಡಿಗೆ ಬಂದಿದ್ದ ಆರೋಪಿ ಬಟ್ಟೆಯನ್ನು ಬದಲಾಯಿಸಿ ಟೋಪಿಯನ್ನು ಬಿಟ್ಟು ಹೋಗಿದ್ದಾನೆ ಎಂಬ ವಿಚಾರ ಸಿಸಿಬಿ (CCB) ಮೂಲಗಳಿಂದ ಪಬ್ಲಿಕ್‌ ಟಿವಿಗೆ ಸಿಕ್ಕಿದೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟ ಬಳಿಕ ಕುಂದಲಹಳ್ಳಿ ಬಸ್‌ ನಿಲ್ದಾಣದಿಂದ ವೋಲ್ವೋ ಬಸ್‌ ಹತ್ತಿದ್ದ. ಈ ಬಸ್‌ ಅಲ್ಲದೇ ಹಲವು ಬಸ್‌ ಹತ್ತಿ ಕೊನೆಗೆ ಹೊಡಿ ಬಳಿಯ ಪ್ರಾರ್ಥನ ಮಂದಿರದ ಸಮೀಪ ಬಂದಿದ್ದ ವಿಚಾರ ಎನ್‌ಐಎ, ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.

 

ಪ್ರಾರ್ಥನಾ ಮಂದಿರದ  ಬಳಿ ಬಟ್ಟೆ ಬದಲಾಯಿಸಿ  ಟೋಪಿಯನ್ನು ಬಿಟ್ಟು ಹೋಗಿದ್ದಾನೆ. ಈಗ ಎನ್‌ಐಎ (NIA) ಆರೋಪಿ ಬಳಸಿದ್ದ ಟೋಪಿಯನ್ನು ವಶಪಡಿಸಿಕೊಂಡಿದೆ. ಇದನ್ನೂ ಓದಿ: ವೋಲ್ವೋ ಬಸ್ಸಿನಲ್ಲಿ ಸಿಸಿಟಿವಿ ನೋಡಿ ಹೆದರಿದ ಬಾಂಬರ್‌!

ಬಾಂಬ್‌ ಸ್ಟೋಟ ನಡೆದ ದಿನವಾದ ಮಾರ್ಚ್‌ 1 ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ಬೀದರ್‌ಗೆ (Bengaluru To Bidar) ಹೋಗುವ ಬಸ್‌ ಹತ್ತಿದ್ದಾನೆ. ಸಂಜೆ 4:30ಕ್ಕೆ ತುಮಕೂರಿನ ಕಳ್ಳಂಬೆಳ್ಳ ಟೋಲ್, ಸಂಜೆ 5 ಗಂಟೆಗೆ ಶಿರಾವನ್ನು ಬಸ್‌ ದಾಟಿದೆ. ಬಸ್‌ ಬಳ್ಳಾರಿಗೆ ತಲುಪಿದ ನಂತರ ಇಳಿದಿದ್ದಾನೆ. ಬೆಂಗಳೂರಿನಿಂದ ದೀರ್ಘ ಪ್ರಯಾಣ ಮಾಡಿದರೂ ಆತ ಯಾವುದೇ ನಿಲ್ದಾಣದಲ್ಲೇ ಇಳಿಯದೇ ಬಸ್‌ನಲ್ಲಿ ಕುಳಿತಿದ್ದ.

 
ಬಳ್ಳಾರಿಯಿಂದ ಬೀದರ್‌ ಅಥವಾ ಭಟ್ಕಳಕ್ಕೆ ಹೋಗಿರುವ ಅನುಮಾನ ಈಗ ವ್ಯಕ್ತವಾಗಿದೆ. ಎನ್‌ಐಎ ಮತ್ತು ಸಿಸಿಬಿ ಪೊಲೀಸರಿಗೆ ಶಂಕಿತನ ಸ್ಪಷ್ಟವಾದ ಚಿತ್ರ ಸಿಕ್ಕಿದೆ. ಶಂಕಿತ ಹಿಂದಿ ಮಾತನಾಡುತ್ತಿದ್ದು ಹೊರ ರಾಜ್ಯದವನು ಇರಬಹುದು ಎಂಬ ಶಂಕೆ ಈಗ ವ್ಯಕ್ತವಾಗಿದೆ.