ಗಂಗಾ ನದಿಯಲ್ಲಿ ಪದಕ ವಿಸರ್ಜಿಸಲು ಮುಂದಾದ ಕುಸ್ತಿಪಟುಗಳನ್ನು ತಡೆದ ರೈತ ಹೋರಾಟಗಾರ

ನವದೆಹಲಿ: ಸರ್ಕಾರ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (WFI) ಮುಖ್ಯಸ್ಥ ಹಾಗೂ ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಸಿಂಗ್ (Brij Bhushan Sharan Singh) ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಬೇಸತ್ತ ಕುಸ್ತಿಪಟುಗಳು (Wrestlers) ತಮ್ಮ ಪದಕಗಳನ್ನು (Medals) ಗಂಗಾ ನದಿಯಲ್ಲಿ (Ganga River) ವಿಸರ್ಜಿಸಲು ಮುಂದಾಗಿದ್ದರು. ಕುಸ್ತಿಪಟುಗಳ ಈ ನಡೆಯನ್ನು ಸದ್ಯ ತಡೆಯಲಾಗಿದ್ದು, ಸಿಂಗ್ ಬಂಧನಕ್ಕೆ 5 ದಿನಗಳ ಕಾಲಾವಕಾಶ ನೀಡಲು ಒಪ್ಪಿಕೊಂಡಿದ್ದಾರೆ.

ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪವನ್ನು ಹೊರಿಸಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ತಮ್ಮ ಪದಕಗಳನ್ನು ಸಂಜೆ 6 ಗಂಟೆಗೆ ಹರಿದ್ವಾರದ ಬಳಿ ಗಂಗಾ ನದಿಯಲ್ಲಿ ಎಸೆಯುವುದಾಗಿ ಪ್ರಕಟಿಸಿದ್ದರು. ಗಂಗೆಯಲ್ಲಿ ಪದಕಗಳನ್ನು ವಿಸರ್ಜಿಸಲು ಮುಂದಾದಾಗ ರೈತ ಹೋರಾಟಗಾರ ನರೇಶ್ ಟಿಕಾಯತ್ ಕುಸ್ತಿಪಟುಗಳ ಮೆಡಲ್‌ಗಳನ್ನು ಪಡೆದುಕೊಂಡಿದ್ದಾರೆ.

ಬಳಿಕ ಕುಸ್ತಿಪಟುಗಳೊಂದಿಗೆ ಮಾತುಕತೆ ನಡೆಸಿದ ನರೇಶ್ ಟಿಕಾಯತ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರೆ. ಮುಂದಿನ 5 ದಿನಗಳೊಳಗೆ ಬ್ರಿಜ್ ಭೂಷಣ್ ಬಂಧನವಾಗದಿದ್ದರೆ ಮತ್ತೆ ಹರಿದ್ವಾರಕ್ಕೆ ಬಂದು ಪದಕಗಳನ್ನು ವಿಸರ್ಜಿಸುವುದಾಗಿ ಕುಸ್ತಿಪಟುಗಳು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ Vs ಡಿಎಂಕೆ – ಬಿಜೆಪಿ ಕಾರ್ಯಕರ್ತ ಜಡೇಜಾ ಆಟದಿಂದ ಚೆನ್ನೈಗೆ ಜಯ ಎಂದ ಅಣ್ಣಾಮಲೈ

ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ ಹಲವು ದಿನಗಳಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದರು. ನೂತನ ಸಂಸತ್ ಭವನದತ್ತವೂ ತೆರಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದರು. ಇದನ್ನೂ ಓದಿ: ಮನೆಗೆ ಅತ್ತೆಯೇ ಸಿನಿಯರ್, ಅತ್ತೆ ಒಪ್ಪಿದ್ರಷ್ಟೇ ಸೊಸೆಗೆ 2,000 – ಲಕ್ಷ್ಮಿ ಹೆಬ್ಬಾಳ್ಕರ್