ಗಣಿತ ಸಮಸ್ಯೆ ಬಿಡಿಸಲಿಲ್ಲವೆಂದು 8 ವರ್ಷದ ಬಾಲಕನ ಗಂಟಲಿಗೆ ಕೋಲಿನಿಂದ ಚುಚ್ಚಿದ ಶಿಕ್ಷಕಿ

ಅಹ್ಮದ್‍ನಗರ: ಗಣಿತ ಸಮಸ್ಯೆ ಬಿಡಿಸಲಿಲ್ಲ ಎಂದು ಕೋಪಗೊಂಡ ಶಿಕ್ಷಕಿಯೋರ್ವಳು 8 ವರ್ಷದ ಬಾಲಕನ ಗಂಟಲಿಗೆ ಮರದ ಕೋಲಿನಿಂದ ಚುಚ್ಚಿದ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

ಮಹಾರಾಷ್ಟ್ರದ ಪಿಂಪಲ್ಗಾಂವ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘೋರ ಕೃತ್ಯ ನಡೆದಿದ್ದು, ಬಾಲಕ ರೋಹನ್ ಡಿ ಜಂಜೀರ್ ಹಲ್ಲೆಗೊಳಗಾದ ಬಾಲಕ. ಘಟನೆಯಿಂದ ರೋಹನ್ ನ ಅನ್ನನಾಳ ಮತ್ತು ವಾಯುನಾಳಗಳಿಗೆ ತೀವ್ರ ಏಟಾಗಿದ್ದು, ಸದ್ಯ ಮಾತನಾಡಲು ಸಾಧ್ಯವಾಗುತ್ತಿಲ್ಲ.

ಶಿಕ್ಷಕಿ ಹಲ್ಲೆ ನಡೆಸಿದ ತಕ್ಷಣ ರೋಹನ್ ಗಂಟಲಿನಿಂದ ರಕ್ತಸ್ರಾವವಾಗಿದೆ. ಘಟನೆಯನ್ನು ಕಣ್ಣಾರೆ ಕಂಡ ಇತರೆ ವಿದ್ಯಾರ್ಥಿಗಳು ಕಿರುಚಿಕೊಂಡಿದ್ದಾರೆ. ಕೂಗು ಕೇಳಿ ಸಿಬ್ಬಂದಿಗಳು ಶಾಲಾ ಕೊಠಡಿಗೆ ದೌಡಾಯಿಸಿದ್ದಾರೆ. ಬಳಿಕ ರೋಹನ್ ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಪುಣೆ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಸದ್ಯಕ್ಕೆ ರೋಹನ್ ಪುಣೆ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬಾಲಕನ ಮೇಲೆ ದರ್ಪ ತೋರಿದ ಶಿಕ್ಷಕಿ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದೆ. ಆದ್ರೆ ಇದೂವರೆಗೂ ಆಕೆಯ ಬಂಧನವಾಗಿಲ್ಲ. ಬಾಲಕನ ಆರೋಗ್ಯ ಸ್ವಲ್ಪ ಮಟ್ಟಿಗೆ ಸುಧಾರಣೆಯಾದ ಬಳಿಕ ಆತನ ಬಳಿಯಿಂದ ಹೇಳಿಕೆ ಪಡೆದುಕೊಳ್ಳುತ್ತೇವೆ. ಬೇಕಿದ್ದಲ್ಲಿ ದೂರಿನ ಪ್ರಮಾಣವನ್ನು ಹೆಚ್ಚಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *