ಹೆದ್ದಾರಿಗಾಗಿ 80ಕ್ಕೂ ಹೆಚ್ಚು ಮರಗಳ ನಾಶ – 4 ಮರಗಳನ್ನ ಸ್ಥಳಾಂತರಿಸಿ ಮತ್ತೆ ನೆಡಲು ಮುಂದಾದ ಸ್ಥಳೀಯರು

ಬೆಂಗಳೂರು: ವರ್ಷದಿಂದ ವರ್ಷಕ್ಕೆ ಮಹಾನಗರಿಯಲ್ಲಿ ಉಷ್ಣಾಂಶ ಏರ್ತಿದ್ದು, ಬೇಸಿಗೆ ಬಂದ್ರೆ ಬೆಚ್ಚಿಬೀಳುವ ಪರಿಸ್ಥಿತಿ ಉಂಟಾಗಿದೆ. ಇತ್ತ ನಗರೀಕರಣದ ಭರಾಟೆಯಲ್ಲಿ ಸಿಮೆಂಟ್ ಕಾಡಾಗಿ ಬದಲಾಗಿರುವ ನಗರಿಯಲ್ಲಿ ಅಭಿವೃದ್ಧಿ ಹೆಸರಲ್ಲಿ ಬಲಿಯಾಗ್ತಿರುವ ಬೃಹತ್ ಮರಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.

ಬೆಂಗಳೂರು ಹೊರವಲಯದ ಸರ್ಜಾಪುರದಲ್ಲಿ ನಾಲ್ಕು ಮರಗಳನ್ನು ಸ್ಥಳಾಂತರ ಮಾಡಲಾಗಿದೆ. ಇದೇ ಮಾರ್ಚ್‍ನಲ್ಲಿ ವರ್ತೂರು ಮತ್ತು ಸರ್ಜಾಪುರ ಮೂಲಕ ಸಾಗುವ ಆನೇಕಲ್-ಹೊಸಕೋಟೆ ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿ ಆರಂಭವಾಗಿದೆ. ಇದಕ್ಕಾಗಿ 80 ಮರಗಳನ್ನು ಕಡಿಯಲಾಗ್ತಿದೆ. ಇದನ್ನು ಅರಿತ ಸರ್ಜಾಪುರ ನಿವಾಸಿಗಳ ಕಲ್ಯಾಣ ಸಮಿತಿ, ತಜ್ಞರ ಸಲಹೆ ಪಡೆದು ಆಲದ ಮರ, ಬೇವಿನ ಮರಗಳನ್ನು ಹತ್ತಿರದಲ್ಲೇ ಇರುವ ಇನ್ವೆಂಚರ್ ಅಕಾಡೆಮಿಯಲ್ಲಿ ಮತ್ತೆ ನೆಡಲು ತೀರ್ಮಾನಿಸಿತು.

ವಿಶೇಷ ಅಂದ್ರೆ ಜನರೇ ಕೈಗೆತ್ತಿಕೊಂಡಿರುವ ಕಾರ್ಯಕ್ಕೆ ಜನರೇ 18 ದಿನಗಳಲ್ಲಿ 3 ಲಕ್ಷ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ. ಚೆನ್ನೈನಿಂದ ಆಗಮಿಸಿರುವ ತಜ್ಞರ ತಂಡದ ಮಾರ್ಗದರ್ಶನದಂತೆ ಎರಡು ಕ್ರೇನ್, ಜೆಸಿಬಿ ಮೂಲಕ ಮರಗಳನ್ನ ಸ್ಥಳಾಂತರಿಸಲಾಗಿದೆ. ಇವತ್ತು ಈ ಮರಗಳನ್ನು ಮತ್ತೊಮ್ಮೆ ನೆಡಲಾಗುತ್ತದೆ.

Comments

Leave a Reply

Your email address will not be published. Required fields are marked *