Hyderabad | ಚಾರ್‌ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿ ಬೆಂಕಿ ಅವಘಡ – 17 ಮಂದಿ ಸಜೀವ ದಹನ

– ಉಸಿರಾಟ ತೊಂದರೆಯಾಗಿ 16ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಹೈದರಾಬಾದ್: ಚಾರ್‌ಮಿನಾರ್ (Charminar) ಬಳಿಯಿರುವ ಗುಲ್ಜಾರ್ ಹೌಸ್‌ನಲ್ಲಿ (Gulzar House) ಭಾರೀ ಬೆಂಕಿ ಅವಘಡ ಸಂಭವಿಸಿದ್ದು, 17 ಮಂದಿ ಸಜೀವ ದಹನವಾಗಿರುವ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.

ಮುಂಜಾನೆ 5:30ರ ಸುಮಾರಿಗೆ ಘಟನೆ ನಡೆದಿದೆ. ಗುಲ್ಜಾರ್ ಹೌಸ್‌ನಲ್ಲಿ 30ಕ್ಕೂ ಹೆಚ್ಚು ಮಂದಿ ಇರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಅವಘಡದ ಪರಿಣಾಮ ಉಸಿರಾಟದ ತೊಂದರೆಯಿಂದಾಗಿ 16ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ರಾಜೇಂದ್ರ ಕುಮಾರ್ (67), ಅಭಿಷೇಕ್ ಮೋದಿ, ಸುಮಿತ್ರಾ, ಮುನ್ನಿಬಾಯ್, ಆರುಷಿ ಜೈನ್, ಶೀತಲ್ ಜೈನ್, ಇರಾಜ್ ಹಾಗೂ ಅರ‍್ಷಾದಿ ಗುಪ್ತಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಮೂಲದ ಏರೋಸ್ಪೇಸ್ ಎಂಜಿನಿಯರ್ ಪಂಜಾಬ್‌ನಲ್ಲಿ ನಿಗೂಢ ಸಾವು

ಗುಲ್ಜಾರ್ ಹೌಸ್‌ನ ಮೊದಲ ಮಹಡಿಯಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಘಟನೆಯ ಸಂಪೂರ್ಣ ವಿವರಗಳು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕೇಂದ್ರ ಸಚಿವ ಕಿಷನ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್‌ನಿಂದ ಕಾರ್ಯಾಚರಣೆ ಮುಂದುವರಿದಿದೆ. ಸಿಎಂ ರೇವಂತ್ ರೆಡ್ಡಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಅಪಮಾನ – ಜಿಎಸ್‌ ಸೂಟ್ಸ್‌ ಹೋಟೆಲ್‌ ಸೀಜ್‌, ಮ್ಯಾನೇಜರ್‌ ಬಂಧನ