75th Republic Day: ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ – ಡಿಕೆಶಿ

– ಕೆಪಿಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಧ್ವಜಾರೋಹಣ

ಬೆಂಗಳೂರು: ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿಂದು 75ನೇ ಗಣರಾಜ್ಯೋತ್ಸವದ (Republic Day) ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ ಶಿವಕುಮಾರ್‌, ಸಿಎಂ ಸಿದ್ದರಾಮಯ್ಯ ಮೊದಲಾದವರು ಉಪಸ್ಥಿತರಿದ್ದರು.

ಧ್ವಜಾರೋಹಣದ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್‌ (DK Sivakumar) ಅವರು, ಮೊದಲ ಬಾರಿಗೆ ಎಎಸಿಸಿ ಅಧ್ಯಕ್ಷರು ಬೆಂಗಳೂರಿನ ಕಚೇರಿಗೆ ಬಂದು ಧ್ವಜಾರೋಹಣ ನೆರವೇರಿಸಿದ್ದಾರೆ, ಇದು ಇತಿಹಾಸ. ರಾಷ್ಟ್ರೀಯ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: 75ನೇ ಗಣರಾಜ್ಯೋತ್ಸವದ ಸಂಭ್ರಮ – ಕರ್ತವ್ಯ ಪಥದಲ್ಲಿ ಗಮನ ಸೆಳೆಯಲಿದೆ ʻನಾರಿ ಶಕ್ತಿʼ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅದು ಎಲ್ಲ ವರ್ಗದ ಜನರೂ ಅಧಿಕಾರಕ್ಕೆ ಬಂದಂತೆ, ಸಂವಿಧಾನವನ್ನ ಸ್ವೀಕಾರ ಮಾಡಿದ ಪವಿತ್ರವಾದ ದಿನವಿದು. ಸಂವಿಧಾನ ಉಳಿದರೆ, ಭಾರತ ಉಳಿಸಿದಂತೆ, ಅದಕ್ಕಾಗಿ ನಮ್ಮ ರಾಷ್ಟ್ರೀಯ ನಾಯಕರು ಹಾಕಿಕೊಟ್ಟ ಮಾರ್ಗದರ್ಶನದಂತೆ ನಾವೆಲ್ಲ ಕೆಲಸ ಮಾಡೋಣ ಎಂದು ಕರೆ ನೀಡಿದರು. ಇದನ್ನೂ ಓದಿ: Republic Day: ನುಡಿದಂತೆ ನಡೆದಿರುವ ಸರ್ಕಾರ 5 ಗ್ಯಾರಂಟಿ ಯಶಸ್ವಿಯಾಗಿ ಜಾರಿ ಮಾಡಿದೆ: ಗೆಹ್ಲೋಟ್

ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಇದನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಯಾವತ್ತೂ ಅಧಿಕಾರದ ಬಗ್ಗೆ ಯೋಚಿಸದೇ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಅವಿರತವಾಗಿ ಶ್ರಮಿಸಿದೆ. ನಮಗೆಲ್ಲಾ ಮೂಲಭೂತ ಹಕ್ಕುಗಳನ್ನು ನೀಡಿರುವ ಸಂವಿಧಾನವೇ ಈ ದೇಶದ ಜೀವಾಳ. ಅದರಂತೆ ಸಂವಿಧಾನದ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದೆ. ನಮ್ಮ ಶ್ರೇಷ್ಠ ಸಂವಿಧಾನದ ಆಶಯಗಳನ್ನು ನಾವೆಲ್ಲರೂ ನಿಷ್ಠೆಯಿಂದ ಪಾಲಿಸೋಣ ಎಂದು ತಿಳಿಸಿದರು.