ಕಾರ್ಖಾನೆ ಕಾಮಗಾರಿ ವೇಳೆ ಗೋಡೆ ಕುಸಿತ – 7 ಕಾರ್ಮಿಕರು ದುರ್ಮರಣ

ಗಾಂಧಿನಗರ: ಕಾರ್ಖಾನೆಯ ಟ್ಯಾಂಕ್‌ ಅಳವಡಿಕೆ ಕಾಮಗಾರಿ ವೇಳೆ ಗೋಡೆ ಕುಸಿದು 7 ಮಂದಿ ಕಾರ್ಮಿಕರು ಸಾವನ್ನಪ್ಪಿದ ಘಟನೆ ಗುಜರಾತ್‌ನ (Gujarat) ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲಾ ಕೇಂದ್ರದಿಂದ ಸುಮಾರು 37 ಕಿಮೀ ದೂರದಲ್ಲಿರುವ ಕಾಡಿ ಪಟ್ಟಣದ ಬಳಿ ಈ ಅವಘಡ ನಡೆದಿದೆ. ಮೃತ ಕಾರ್ಮಿಕರು ಕಾರ್ಖಾನೆಯೊಂದರ ಟ್ಯಾಂಕ್‌ಗಾಗಿ ಗುಂಡಿ ತೆಗೆಯುತ್ತಿದ್ದರು. ಈ ವೇಳೆ ಗೋಡೆ ಕುಸಿದಿದೆ.

ಐವರು ಕಾರ್ಮಿಕರ ಶವಗಳನ್ನು ಹೊರ ತೆಗೆಯಲಾಗಿದೆ. ಮೂರರಿಂದ ನಾಲ್ಕು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ (Police) ಇನ್ಸ್‌ಪೆಕ್ಟರ್ ಪ್ರಹ್ಲಾದಸಿಂಗ್ ವಘೇಲಾ ಹೇಳಿದ್ದಾರೆ.

ಇನ್ನೂ ಹೆಚ್ಚಿನ ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ತರುಣ್ ದುಗ್ಗಲ್ ಹೇಳಿದ್ದಾರೆ.