ಬಿಡದಿ ಬಳಿ 7 ಅಡಿ ಉದ್ದದ ಹೆಬ್ಬಾವಿನ ರಕ್ಷಣೆ

ರಾಮನಗರ: ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಏಳು ಅಡಿ ಉದ್ದದ ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ.

ಕೈಗಾರಿಕಾ ಪ್ರದೇಶದಲ್ಲಿದ್ದ ಟಯೋಟಾ ಕಾರ್ಖಾನೆಯ ಬಳಿ ಹೆಬ್ಬಾವು ಕಾಣಿಸಿಕೊಂಡಿದ್ದು, ಕಾರ್ಖಾನೆ ಸಿಬ್ಬಂದಿಗಳು ಆತಂಕಕ್ಕೆ ಒಳಗಾಗಿದ್ದರು. ಹೆಬ್ಬಾವು ಕಂಡ ಕಾರ್ಖಾನೆ ಸಿಬ್ಬಂದಿ ಕೂಡಲೇ ಭೈರಮಂಗಲ ಗ್ರಾಮದ ಉರಗ ತಜ್ಞ ಸ್ನೇಕ್ ಗಿರಿಧರ್ ಅವರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಸ್ನೇಕ್ ಗಿರಿಧರ್, ಹೆಬ್ಬಾವನ್ನು ರಕ್ಷಣೆ ಮಾಡಿದರು. ಈ ವೇಳೆ ಸ್ಥಳದಲ್ಲಿದ್ದ ಕಾರ್ಮಿಕರಿಗೆ ಹಾವಿನ ಕುರಿತು ಕೆಲ ವಿಶೇಷ ಮಾಹಿತಿಯನ್ನು ನೀಡಿದರು. ಅಲ್ಲದೇ ಹಾವು ಕಂಡರೆ ಕೊಲ್ಲದಿರಿ, ಹಾವುಗಳು ಮಾನವನ ಭಯದಿಂದ ಮಾತ್ರ ಕಚ್ಚುವ ಪ್ರಯತ್ನ ಮಾಡುತ್ತವೆ. ಇಲ್ಲದಿದ್ದರೆ ತಮ್ಮ ಪಾಡಿಗೆ ತಾವಿರುತ್ತವೆ. ಹಾವುಗಳು ಕಂಡ ಕೂಡಲೇ ಕರೆ ಮಾಡಿ ಮಾಹಿತಿ ನೀಡಿ ಎಂದು ಮನವಿ ಮಾಡಿದರು.

ಸದ್ಯ ರಕ್ಷಣೆ ಮಾಡಿದ ಹೆಬ್ಬಾವನ್ನು ಬನ್ನೇರುಘಟ್ಟ ರಾಷ್ಟ್ರೀಯ ವನ್ಯಜೀವಿ ಧಾಮಕ್ಕೆ ರವಾನಿಸಲಾಗಿದೆ. ಏಳು ಅಡಿ ಉದ್ದವಿರುವ ಕಾರಣ ಪ್ರವಾಸಿಗರ ವೀಕ್ಷಣೆಗೂ ಸಹ ಹೆಬ್ಬಾವನ್ನು ಬಳಸಿಕೊಳ್ಳಲು ಸಾಧ್ಯವಿದೆ ಎಂದು ಉರಗ ತಜ್ಞ ಸ್ನೇಕ್ ಗಿರಿಧರ್ ತಿಳಿಸಿದರು.

Comments

Leave a Reply

Your email address will not be published. Required fields are marked *