ಗನ್ ತೋರಿಸಿ ಬೆದರಿಸಿ, ಸಿಬ್ಬಂದಿ ಕೂಡಿಹಾಕಿ ದರೋಡೆ- ಕ್ಯಾಷಿಯರ್‌ಗೆ ಗುಂಡಿಟ್ಟು 3 ಲಕ್ಷದೊಂದಿಗೆ ಪರಾರಿ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಾಡಹಗಲೇ ಸಿನಿಮಾ ಶೈಲಿಯಲ್ಲಿ 6 ಜನ ಮುಸುಕು ಧರಿಸಿದ ದುಷ್ಕರ್ಮಿಗಳು ಕಾರ್ಪೊರೇಶನ್ ಬ್ಯಾಂಕ್‍ಗೆ ನುಗ್ಗಿ ಕ್ಯಾಷಿಯರ್ ಅನ್ನು ಗುಂಡಿಟ್ಟು ಹತ್ಯೆಗೈದು 3 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.

ದೆಹಲಿಯ ಚಾವ್ಲಾ ಟೌನ್ ನಲ್ಲಿ ಈ ಘಟನೆ ನಡೆದಿದ್ದು, ಹಣ ನೀಡದ್ದಕ್ಕೆ ದುಷ್ಕರ್ಮಿಗಳು ಬ್ಯಾಂಕ್ ಕ್ಯಾಶಿಯರ್ ಅನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಈ ದಶಕದ ಮೊದಲ ಬ್ಯಾಂಕ್ ದರೋಡೆ ಎಂಬ ಕುಖ್ಯಾತಿ ಪಡೆದುಕೊಂಡಿದೆ.

ದರೋಡೆ ಎಸಗಿದ್ದು ಹೇಗೆ?
ಶುಕ್ರವಾರ ಸಂಜೆ 5.55ರ ಸುಮಾರಿಗೆ ದೆಹಲಿಯ ನೈಋತ್ಯ ಭಾಗದಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ಗೆ 6 ದುಷ್ಕರ್ಮಿಗಳು ನುಗ್ಗಿದ್ದಾರೆ. ಅದರಲ್ಲಿ 5 ಮಂದಿ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದರೆ ಮತ್ತೋರ್ವ ಹೆಲ್ಮೆಟ್ ಧರಿಸಿದ್ದ. ಬ್ಯಾಂಕಿಗೆ ನುಗ್ಗಿದ್ದ ಇವರು ಭದ್ರತಾ ಸಿಬ್ಬಂದಿಯಿಂದ ಬಂದೂಕನ್ನ ಕಿತ್ತುಕೊಂಡು ಒಳಗಡೆ ಪ್ರವೇಶಿಸಿದ್ದಾರೆ. ಈ ವೇಳೆ ಅಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿಯನ್ನು ಎಳೆತಂದು, ಅವರೆಲ್ಲರನ್ನು ಬೆದರಿಸಿ ಒಂದು ಕಡೆ ಕೂರಿಸಿದ್ದಾರೆ.

ಕೊನೆಯಲ್ಲಿ ಕ್ಯಾಷಿಯರ್ ಕೌಂಟರ್ ಹೋಗಿ ಅಲ್ಲಿದ್ದ ಹಣವನ್ನ ದೋಚಲು ಮುಂದಾಗಿದ್ದರು. ಆದರೆ ದರೋಡೆಗೆ ಅಡ್ಡ ಪಡಿಸಿದ ಕ್ಯಾಷಿಯರ್ ಸಂತೋಷ್ ಮೇಲೆ 2 ಸುತ್ತು ಗುಂಡನ್ನು ಹಾರಿಸಿ ಅವರನ್ನ ಕೊಂದು ಹಣದೊಂದಿಗೆ ಪರಾರಿಯಾಗಿದ್ದಾರೆ.

ಗುಂಡೇಟು ತಿಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತೋಷ್ ಅವರನ್ನು ಸ್ಥಳೀಯರು ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಾರ್ಗಮಧ್ಯೆಯೇ ಸಂತೋಷ್ ಮೃತಪಟ್ಟಿದ್ದರು. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದ ಆಧಾರದ ಮೇಲೆ ಪೊಲೀಸರಿಗೆ ದುಷ್ಕರ್ಮಿಗಳ ಗುರುತು ಪತ್ತೆಯಾಗಿದ್ದು, ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *