6 ಕೋಟಿ ಗಾಂಜಾ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಕಾರ್ಯಕರ್ತ

ಕಲಬುರಗಿ: ಬೆಂಗಳೂರಿನ ಪೊಲೀಸರು ಕಾರ್ಯಚರಣೆ ನಡೆಸಿ ಕಲಬುರಗಿಯಲ್ಲಿ 1,300 ಕೆಜಿ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದಲ್ಲಿ ಬಂಧಿತ ಪ್ರಮುಖ ಆರೋಪಿ ಚಂದ್ರಕಾಂತ್ ಚೌವ್ಹಾಣ್ ಬಿಜೆಪಿ ಕಾರ್ಯಕರ್ತ ಎಂಬುದು ದೃಢಪಟ್ಟಿದೆ.

ಆತ ಬಿಜೆಪಿಯ ಇತರೆ ಕಾರ್ಯಕರ್ತರ ಜೊತೆ ತೆಗೆದುಕೊಂಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಇದನ್ನು ಉಪಯೋಗಿಸಿಕೊಳ್ಳಲು ಕಾಂಗ್ರೆಸ್ ಪಕ್ಷದ ಮುಖಂಡರು ಸಜ್ಜಾಗಿದ್ದಾರೆ. ಈ ಕುರಿತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಚಂದ್ರಕಾಂತ್ ಬಿಜೆಪಿ ಕಾರ್ಯಕರ್ತ ಎಂದು ಅವನ ಫೋಟೋ ಹಾಕಿ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.

ಆರೋಪಿ ಚಂದ್ರಕಾಂತ್ ಯಾವ ನಾಯಕರ ಬೆಂಬಲದಿಂದ ಈ ಕೆಲಸ ನಡೆಸುತ್ತಿದ್ದ ಎಂಬದನ್ನು ಸಹ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಗಾಂಜಾ, ಇಸ್ಪಿಟ್ ಕ್ಲಬ್ ಸೇರಿದಂತೆ ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕಿದ್ದೆವು. ಆದರೆ ಬಿಜೆಪಿ ಸರ್ಕಾರ ಬರುತ್ತಿದ್ದಂತೆ ಅಕ್ರಮ ದಂಧೆಗಳ ಕೇಂದ್ರವಾಗಿ ಕಲಬುರಗಿ ಜಿಲ್ಲೆ ಮಾರ್ಪಟ್ಟಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಅವರು, ಬಿಜೆಪಿಯವರೇ ನಿಮ್ಮದೇ ಸರ್ಕಾರವಿದೆ. ನಿಮ್ಮ ಬಳಿ ಎಲ್ಲ ಸಂಪನ್ಮೂಲಗಳು ಇವೆ. ಅವುಗಳನ್ನು ಉಪಯೋಗಿಸಿಕೊಂಡು ಕಲಬುರಗಿಯಲ್ಲಿ ಅಕ್ರಮವಾಗಿ ಸ್ಥಾಪಿಸಿರುವ ಜೂಜು ಅಡ್ಡೆಗಳನ್ನು ಕಂಡುಹಿಡಿಯಿರಿ. ಈ ರೀತಿಯ ಕ್ಲಬ್‍ಗಳನ್ನು ನಡೆಸಲು ಯಾರೂ ಅನುಮತಿ ಕೊಟ್ಟಿದ್ದಾರೆ ಎಂಬುದನ್ನು ಕಂಡುಹಿಡಿಯಿರಿ. ಯಾವು ರಾಜಕೀಯ ನಾಯಕ ರಕ್ಷಣೆಯಿಂದ ಇವರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಎಂದು ಸವಾಲ್ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *