ಮಹಾಮಳೆಗೆ ಕೊಚ್ಚಿಹೋಯ್ತು 50 ಲಕ್ಷ ವೆಚ್ಚದ ಸೇತುವೆ- 15 ಹಳ್ಳಿಗಳ ಸಂಪರ್ಕ ಕಡಿತ

ಹಾಸನ: ಜಿಲ್ಲೆಯಲ್ಲಿ ಸುರಿದ ಮಹಾ ಮಳೆಗೆ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆಯೊಂದು ಕೊಚ್ಚಿಹೋಗಿದ್ದು, ತಾಲೂಕು ಕೇಂದ್ರ ಬೇಲೂರಿನ ಜೊತೆ 15 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಮಹಾಮಳೆ ಸಾಕಷ್ಟು ಅನಾಹುತ ಸೃಷ್ಟಿಸಿತ್ತು. ಮಳೆ ನಿಂತ ಬಳಿಕ ಮಳೆರಾಯನ ಆರ್ಭಟಕ್ಕೆ ಏನೇನು ಹಾನಿಯಾಗಿದೆ ಎನ್ನುವುದು ತಿಳಿದುಬಂದಿದೆ. ಉಕ್ಕಿ ಹರಿದ ಯಗಚಿ ಹೊಳೆ ಪ್ರವಾಹದಲ್ಲಿ ಅಗಸರಹಳ್ಳಿ ಸೇತುವೆ ಕೊಚ್ಚಿಹೋಗಿದೆ. ಕಳೆದ ಐದು ವರ್ಷದ ಹಿಂದೆ 50 ಲಕ್ಷ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣಗೊಂಡಿತ್ತು. ಸುಮಾರು 15 ಗ್ರಾಮಗಳ ಓಡಾಟಕ್ಕೆ ಈ ಸೇತುವೆಯೇ ಆಧಾರವಾಗಿತ್ತು.

ಮಳೆಗೆ ಸೇತುವೆ ಕೊಚ್ಚಿಹೋದ ಪರಿಣಾಮ ತಾಲೂಕು ಕೇಂದ್ರ ಬೇಲೂರಿನ ಜೊತೆ 15 ಹಳ್ಳಿಗಳು ಸಂಪರ್ಕ ಕಡಿತಗೊಂಡಿದೆ. ಕೇವಲ 7 ಕಿಲೋಮೀಟರ್ ದೂರದ ಬೇಲೂರಿಗೆ ತಲುಪಲು ಈಗ ಜನರು 20 ಕಿಮೀ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ. ಕೆಲ ಕಡೆಯಲ್ಲಿ ರಸ್ತೆಯಿಲ್ಲದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರ ಪರದಾಡುತ್ತಿದ್ದಾರೆ. ಅಗಸರಹಳ್ಳಿ, ಯಮಸಂದಿ, ಗಂಜಲಗೂಡು, ಬೀಟೆಮನೆ, ಐರವಳ್ಳಿ ಸೇರಿದಂತೆ 15 ಹಳ್ಳಿಗಳ ಜನರು ಗೋಳಾಡುತ್ತಿದ್ದಾರೆ. ಆದ್ದರಿಂದ ಕೂಡಲೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಜನರ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

ಮಳೆ ಬರುತ್ತಿದ್ದಾಗ ಒಂದು ರೀತಿ ಕಷ್ಟವಾದರೆ, ಮಳೆ ನಿಂತ ಮೇಲೆ ಇನ್ನೊಂದು ರೀತಿ ಸಂಕಷ್ಟವನ್ನು ಜನರು ಎದುರಿಸುತ್ತಿದ್ದಾರೆ. ಸದ್ಯ ಮಳೆಗೆ ಜಲಾವೃಗೊಂಡಿದ್ದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಇಳಿದಿದೆ. ಆದರೆ ಜನರು ಮಾತ್ರ ಇನ್ನೂ ಸಂಕಷ್ಟವನ್ನು ಎದುರಿಸುತ್ತಲೇ ಇದ್ದಾರೆ.

Comments

Leave a Reply

Your email address will not be published. Required fields are marked *