ಲಾರಿ-ಕಾರು ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ ಐವರ ದುರ್ಮರಣ

ರಾಯಚೂರು: ಸಿಂಧನೂರು ತಾಲೂಕಿನ ದಡೆಸುಗೂರು ಬಳಿ ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ ಐದು ಜನ ಮೃತಪಟ್ಟ ಘಟನೆ ನಡೆದಿದೆ.

ಅಪಘಾತದಲ್ಲಿ ಪತಿ ಹುಸೇನ್ ಭಾಷೆ(35), ಪತ್ನಿ ಮೌಲಾನಾ( 32), ಮಕ್ಕಳಾದ ಗುಲಾಬ್ ಶಾ(5) ಸಾಬೀರ್(14)ಮೆಹಬೂಬ್ ಪಾಷಾ(3) ಮೃತಪಟ್ಟಿದ್ದಾರೆ. ಎರಡು ವರ್ಷದ ಬಾಲಕಿ ಅಲ್ಸಿಯಾ ಬದುಕುಳಿದಿದ್ದು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕೊಪ್ಪಳದ ಗಂಗಾವತಿಯ ಅಂಬೇಡ್ಕರ್ ನಗರದ ನಿವಾಸಿಗಳಾದ ಮೃತರು ಬಳ್ಳಾರಿಯ ಸಿರಗುಪ್ಪಕ್ಕೆ ಹೊರಟಿದ್ದರು. ಮೃತ ಮೌಲಾನಾ ತೌರುಮನೆ ಸಿರಗುಪ್ಪದಲ್ಲಿ ಕಾರ್ಯಕ್ರಮವೊಂದಕ್ಕೆ ಕುಟುಂಬ ಸಹಿತ ಹೊರಟಿದ್ದರು. ಅತೀವೇಗದಲ್ಲಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಮೂರು ಜನರನ್ನು ಬಳ್ಳಾರಿಯ ವಿಮ್ಸ್ ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆ.

ಘಟನೆ ಹಿನ್ನೆಲೆ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

Comments

Leave a Reply

Your email address will not be published. Required fields are marked *