ರಾಮ ಮಂದಿರಕ್ಕೆ ಪೇಜಾವರ ಮಠದಿಂದ 5 ಲಕ್ಷ ರೂ. ದೇಣಿಗೆ

ಉಡುಪಿ: ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಮೊದಲ ಸಭೆಯಲ್ಲಿ ಉಡುಪಿ ಪೇಜಾವರ ಮಠದಿಂದ ರಾಮಮಂದಿರ ನಿರ್ಮಾಣಕ್ಕೆ ಐದು ಲಕ್ಷ ರೂ. ಆರಂಭಿಕ ದೇಣಿಗೆ ನೀಡಲಾಗಿದೆ.

ದೆಹಲಿಯಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಪಾಲ್ಗೊಂಡ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥರು, ರಾಮ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲರನ್ನು ಟ್ರಸ್ಟ್ ಸಭೆಯಲ್ಲಿ ಸ್ಮರಣೆ ಮಾಡಲಾಗಿದೆ. ಸಭೆಗೆ ಅವಕಾಶ ಮಾಡಿಕೊಟ್ಟ ಸರ್ವೋಚ್ಛ ನ್ಯಾಯಾಲಯಕ್ಕೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಪೇಜಾವರ ಮಠದ ವತಿಯಿಂದ ರಾಮಮಂದಿರ ನಿರ್ಮಾಣಕ್ಕೆ ಐದು ಲಕ್ಷ ರೂ.ಯ ಮೊದಲ ದೇಣಿಗೆಯನ್ನು ವಿಶ್ವೇಶತೀರ್ಥ ಸ್ವಾಮೀಜಿ ಹೆಸರಲ್ಲಿ ನೀಡಿದ್ದೇವೆ ಎಂದು ವಿಶ್ವಪ್ರಸನ್ನರು ಹೇಳಿದರು.

ಉಡುಪಿ ಕೃಷ್ಣಮಠದ ಪ್ರಸಾದವನ್ನು ಟ್ರಸ್ಟ್ ಸದಸ್ಯರಿಗೆ ನೀಡಿದ್ದೇವೆ ಎಂದರು. ಮಂದಿರ ನಿರ್ಮಾಣಕ್ಕೆ ಸಾರ್ವಜನಿಕರು ದೇಣಿಗೆ ಕೊಡುವ ಅವಕಾಶ ಇದೆ. ಮೊತ್ತವನ್ನು ನೇರ ಬ್ಯಾಂಕ್ ಖಾತೆಗೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ರಾಮ ಮಂದಿರ ಶಾಸ್ತ್ರೋಕ್ತವಾಗಿ ನಿರ್ಮಾಣವಾಗಬೇಕೆಂಬ ತೀರ್ಮಾನ ಕೈಗೊಳ್ಳಲಾಗಿದೆ. ದೇಶಾದ್ಯಂತ ದೇಗುಲ, ಮನೆಗಳಲ್ಲಿ ರಾಮಜಪ ಪಾರಾಯಣಕ್ಕೆ ತೀರ್ಮಾನಿಸಿದ್ದು, ಮಂದಿರ ನಿರ್ಮಾಣದವರೆಗೆ ದೇಶಾದ್ಯಂತ ರಾಮಾಯಣ ಪಾರಾಯಣ ನಡೆಯಲಿದೆ ಎಂದರು.

ಮಂದಿರ ನಿರ್ಮಾಣಕ್ಕೆ ವಿಶೇಷ ಸಮಿತಿಯೊಂದನ್ನು ರಚಿಸಲು ಇಂದು ತೀರ್ಮಾನಿಸಲಾಯಿತು. ಮುಂದಿನ ಸಭೆ, ಅಲ್ಲಿ ನಡೆಯಬೇಕಾದ ಚರ್ಚೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *