ರಾಯಚೂರು ರೈತನ ಸಾಲ 5 ಲಕ್ಷ: ಬ್ಯಾಂಕ್ ಕೇಳುತ್ತಿದೆ 24 ಲಕ್ಷ!

-ಬ್ಯಾಂಕ್‍ನಿಂದ ರೈತನಿಗೆ ಸ್ಥಿರಾಸ್ಥಿ ಜಪ್ತಿ ವಾರೆಂಟ್

-ಸಿಎಂ ಆದೇಶ ಮೀರಿ ಬಲವಂತದ ವಸೂಲಿಗೆ ಮುಂದಾಗಿರುವ ಬ್ಯಾಂಕ್

ರಾಯಚೂರು: ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು ರೈತರು ಸಾಲದ ಸುಳಿಯಲ್ಲಿ ನಲುಗಿ ಹೋಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ನೋಟಿಸ್ ನೀಡಬಾರದು ಎಂದು ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಜಿಲ್ಲೆಯಲ್ಲಿ ಮಾತ್ರ ಬಡ್ಡಿಗೆ ಬಡ್ಡಿ ಹಾಕಿ ರೈತನ ಮನೆ, ಜಮೀನಿನ ಹರಾಜಿಗೆ ಬ್ಯಾಂಕ್ ಮುಂದಾಗಿದೆ.

ದೇವದುರ್ಗದ ಗೂಗಲ್ ಗ್ರಾಮದ ರೈತ ದೊಡ್ಡವಿರುಪಾಕ್ಷಪ್ಪ ಬ್ಯಾಂಕ್ ನೋಟಿಸ್‍ಗಳನ್ನ ಹಿಡಿದು ಸಹಾಯಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.

ಐದು ಎಕರೆ 12 ಗುಂಟೆ ಜಮೀನು ಹೊಂದಿರುವ ದೊಡ್ಡವಿರುಪಾಕ್ಷಪ್ಪ ಕೃಷಿ ಚಟುವಟಿಕೆಗಳಿಗಾಗಿ ಇಲ್ಲಿನ ಕೊಪ್ಪರ ಶಾಖೆಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನಲ್ಲಿ 5 ಲಕ್ಷ ಸಾಲ ಪಡೆದಿದ್ದರು. ಆದ್ರೆ ಸಾಲದ ಮೊತ್ತವನ್ನ 10 ಲಕ್ಷ 81 ಸಾವಿರ ಅಂತ ಹೇಳುತ್ತಿರುವ ಬ್ಯಾಂಕ್ ಈಗ ಬಡ್ಡಿಗೆ ಬಡ್ಡಿ ಸೇರಿಸಿ 24 ಲಕ್ಷ 42 ಸಾವಿರ ಕಟ್ಟುವಂತೆ ನೋಟೀಸ್ ನೀಡಿದೆ. ಸಾಲ ಪಾವತಿಸದಿದ್ದರೆ ಚಿರಾಸ್ಥಿಗಳಾದ ಮನೆ, ಜಮೀನನ್ನ ಹರಾಜು ಹಾಕುವುದಾಗಿ ವಾರೆಂಟ್ ನೀಡಿದೆ. ಇದರಿಂದ ದಿಗಿಲುಗೊಂಡಿರುವ ರೈತ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತಿದ್ದಾರೆ.

2006 ರಿಂದ 9 ಕಂತುಗಳಲ್ಲಿ ಐದು ಲಕ್ಷ ರೂಪಾಯಿ ಸಾಲ ಪಡೆದ ರೈತ ಈಗಲೂ ಸಾಲ ತೀರಿಸಲು ಸಿದ್ಧರಿದ್ದಾರೆ. ಆದ್ರೆ ನ್ಯಾಯಯುತವಾದ ಮೊತ್ತವನ್ನ ನಿಗದಿ ಪಡಿಸಿ ಕಂತುಗಳಲ್ಲಿ ಕಟ್ಟಲು ಅವಕಾಶ ಕೊಡಿ ಅಂತ ಕೇಳುತ್ತಿದ್ದಾರೆ. ಇನ್ನೂ ರೈತನ ಬೆಂಬಲಕ್ಕೆ ನಿಂತಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬ್ಯಾಂಕ್‍ನ ನಡೆಯನ್ನ ಖಂಡಿಸಿದೆ. ರೈತನ ಸ್ಥಿರಾಸ್ಥಿ ಜಪ್ತಿಗೆ ಮುಂದಾದ್ರೆ ಪರಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಅಂತ ರೈತ ಮುಖಂಡ ಚಾಮರಸ ಮಾಲೀಪಾಟೀಲ್ ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ, ಸತತ ಮೂರು ವರ್ಷಗಳ ಬರಗಾಲ, ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತ ವಿರುಪಾಕ್ಷಪ್ಪನಿಗೆ ಬ್ಯಾಂಕ್‍ನ ಸ್ಥಿರಾಸ್ಥಿ ಜಪ್ತಿ ವಾರೆಂಟ್ ದಿಕ್ಕುಕಾಣದಂತೆ ಮಾಡಿದೆ. ಕನಿಷ್ಠ ಈಗಲಾದ್ರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಕಷ್ಟಕ್ಕೆ ಸ್ಪಂದಿಸಬೇಕಿದೆ. ಸಾಲ ತೀರಿಸಲು ಬ್ಯಾಂಕ್ ಅನುವುಮಾಡಿಕೊಡಬೇಕಿದೆ.

Comments

Leave a Reply

Your email address will not be published. Required fields are marked *