ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ: ಒಂದೇ ಕುಟುಂಬದ ಐವರ ದುರ್ಮರಣ

ಮುಂಬೈ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ ಒಂದೇ ಕುಟುಂಬದ ಐವರು ಹಿರಿಯ ನಾಗರೀಕರು ಮೃತಪಟ್ಟ ಘಟನೆ ಮಹಾನಗರದ ಉಪನಗರ ಚೆಂಬೂರ್‍ನ ತಿಲಕ್ ನಗರದಲ್ಲಿ ಸಂಭವಿಸಿದೆ.

ಮೃತರನ್ನು ಸುನಿತಾ ಜೋಶಿ (72), ಬಾಲಚಂದ್ರನ್ ಜೋಶಿ (72), ಸುಮನ್ ಶ್ರೀನಿವಾಸ್ ಜೋಶಿ (83), ಸರಳ ಸುರೇಶ್ ಗಂಗರ್ (52) ಹಾಗೂ ಲಕ್ಷ್ಮೀಬೆನ್ ಪ್ರೇಮ್‍ಜಿ ಗಂಗರ್ (83) ಎಂದು ಗುರುತಿಸಲಾಗಿದೆ.

ಗುರುವಾರ ಸಂಜೆ 7.15ರ ಸುಮಾರಿಗೆ ಗಣೇಶ್ ಗಾರ್ಡನ್ ಸಮೀಪದ ಸಂಗಮ್ ಸೊಸೈಟಿಗೆ ಸೇರಿದ್ದ ಬಹುಮಹಡಿ ಕಟ್ಟಡದ 11ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊ0ಡಿತ್ತು. ನೋಡ ನೋಡುತ್ತಲೇ ಬೆಂಕಿ ಸಂಪೂರ್ಣ ಮಹಡಿಯನ್ನು ಆವರಿಸಿಕೊಂಡಿತ್ತು. ಪರಿಣಾಮ ಒಂದೇ ಕುಟುಂಬದ ಐವರು ಹಿರಿಯರು ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸುಮಾರು 15ಕ್ಕೂ ಹೆಚ್ಚು ಅಗ್ನಿಶಾಮಕ ದಳ ಹಾಗೂ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ಒಂದೇ ಮನೆಯಲ್ಲಿ ಸಿಲುಕಿ ಗಂಭೀರವಾಗಿ ಸುಟ್ಟಗಾಯಗಳಿಂದ 5 ಮಂದಿಯನ್ನು ರಕ್ಷಿಸಿದರೂ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅಸುನೀಗಿದ್ದಾರೆ. 11 ನೇ ಮಹಡಿಯಲ್ಲಿದ್ದ ಎಲ್ಲಾ ನಿವಾಸಿಗಳನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಗ್ನಿಶಾಮಕ ದಳದ ಅಧಿಕಾರಿ, ಸುಮಾರು 10.30ರ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿತ್ತು. ಬೆಂಕಿಯ ಅವಘಡಕ್ಕೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಕ್ಕ-ಪಕ್ಕದ ನಿವಾಸಿಗಳ ಪ್ರಕಾರ ಬೆಂಕಿ ಹೊತ್ತಿಕೊಳ್ಳುವ ಮೊದಲು ದೊಡ್ಡದಾದ ಸ್ಫೋಟದ ಶಬ್ಧ ಕೇಳಿಬಂದಿತ್ತು ಎಂದು ಹೇಳಿದ್ದಾರೆ. ಹೀಗಾಗಿ ಅಗ್ನಿ ಅವಘಡಕ್ಕೆ ಗ್ಯಾಸ್ ಸಿಲಿಂಡರ್ ಸ್ಫೋಟವೇ ಕಾರಣ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಒಂದೇ ಕುಟುಂಬದ ಐವರು ಮೃತಪಟ್ಟಿದ್ದರೇ, ಓರ್ವ ಅಗ್ನಿಶಾಮಕ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *