ಕುಂಭದ್ರೋಣ ಮಳೆಗೆ ಮುಂಬೈನಲ್ಲಿ 5 ಸಾವು: ಕರ್ನಾಟಕದಲ್ಲೂ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಮುಂಬೈನಲ್ಲಿ ಭಾರೀ ಮಳೆ ಸುರಿದು ಅವಾಂತರ ಸೃಷ್ಟಿಸಿದೆ.  ಕರ್ನಾಟಕದಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಕೊಡಗು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ನಾನಾ ಕಡೆ ಅವಾಂತರಗಳು ಸೃಷ್ಟಿಯಾಗಿವೆ.

ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೇರಳ, ಕರ್ನಾಟಕ, ಗೋವಾ ತೀರಗಳಲ್ಲಿ ಹೆಚ್ಚಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಮುಂಬೈ ತತ್ತರ: ಗಣೇಶ ಹಬ್ಬದ ಸಂಭ್ರಮದಲ್ಲಿರುವ ಮುಂಬೈ ಜನತೆ ಕುಂಭದ್ರೋಣ ಮಳೆಗೆ ಸಂಪೂರ್ಣ ತತ್ತರಿಸಿ ಹೋಗಿದ್ದಾರೆ. ರಾಷ್ಟ್ರದ ವಾಣಿಜ್ಯ ನಗರಿ ಇದೀಗ ಐರ್ಲ್ಯಾಂಡ್ ಆಗಿ ಮಾರ್ಪಟ್ಟಿದೆ. ಬಿಟ್ಟು ಬಿಡದೇ ಸುರೀತಿರೋ ಮಳೆಗೆ ಜನ, ಇನ್ನಿಲ್ಲದಂತೆ ಪರದಾಡುವಂಥ ಪರಿಸ್ಥಿತಿ ಎದುರಾಗಿದೆ. ಮಳೆ ಸಂಬಂಧ ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

ದಿನಕ್ಕೆ ಐದಾರು ಬಾರಿ ಧೋ ಅಂತಾ ಸುರಿಯೋ ಮಳೆಗೆ ಮುಂಬೈ ಮುಳುಗಡೆಯಾಗಿದೆ. ಚೆನ್ನೈ ಮಹಾಮಳೆ ನೆನಪಿಸುವಷ್ಟರ ಮಟ್ಟಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಬಾಂದ್ರಾ, ಮಾತುಂಗಾ, ಸಾಂತಕ್ರೂಸ್, ಬೈಕುಲ್ಲಾ, ದಾದರ್, ವಕೋಲಾ, ಅಂಧೇರಿ, ಧಾರಾವಿ, ಚೆಂಬೂರು, ಹಿಂದೂಮಠ ಸೇರಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ಕೇವಲ 5 ಗಂಟೆಗಳಲ್ಲಿ ದಾಖಲೆಯ 126 ಮಿಲಿಮೀಟರ್ ಮಳೆಯಾಗಿದೆ. ವರುಣನ ಆರ್ಭಟಕ್ಕೆ ಇಡೀ ನಗರವೇ ಸಂಪೂರ್ಣ ಸ್ತಬ್ಧಗೊಂಡಿದೆ. ಅಲ್ಲದೇ ಎಲ್ಲಾ ಸಾರಿಗೆ ವ್ಯವಸ್ಥೆಗಳು ಬಂದ್ ಆಗಿದೆ.

ಮುಂದಿನ 48 ಗಂಟೆ ಭಾರಿ ಮಳೆಯಾಗೋ ಸಾಧ್ಯತೆ ಇದ್ದು. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಶಾಲೆ-ಕಾಲೇಜುಗಳಿಗೆ ಗುರುವಾರದವರೆಗೂ ರಜೆ ಘೋಷಿಸಲಾಗಿದೆ. ಮನೆಗಳಿಂದ ಹೊರ ಬರಬೇಡಿ ಅಂತಾ ಖಡಕ್ ಸೂಚನೆ ನೀಡಲಾಗಿದೆ. ಕೆಲ ಖಾಸಗಿ ಕಂಪನಿಗಳು ಕೂಡ ರಜೆ ನೀಡಿವೆ. ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು ಈಗಾಗಲೇ 5 ಎನ್‍ಡಿಆರ್‍ಎಫ್ ತಂಡ ರಕ್ಷಣಾ ಕೆಲಸ ಆರಂಭಿಸಿದೆ.

Comments

Leave a Reply

Your email address will not be published. Required fields are marked *