ಲಿಂಗಾಯತವೇ ಪ್ರತ್ಯೇಕ ಧರ್ಮಕ್ಕೆ ಯೋಗ್ಯ.. ವೀರಶೈವ ಅಲ್ಲ: ಸಭೆಯ ಪಂಚ ನಿರ್ಣಯಗಳು ಇಲ್ಲಿದೆ

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೇ ಮಾನ್ಯತೆ ನೀಡಬೇಕು ಎಂದು ಗುರುವಾರ ನಡೆದ ಲಿಂಗಾಯತ ಮುಖಂಡರು ಮತ್ತು ಮಠಾಧೀಶರ ಮಹತ್ವದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವೀರಶೈವ ಮಹಾಸಭಾ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿರುವ ಲಿಂಗಾಯತ ಮಠಾಧೀಶರು ವೀರಶೈವ ಪದ ಬಳಕೆ ಸಲ್ಲದು ಅಂತಾ ವೀರಶೈವ ಮಹಾಸಭಾಗೆ ಎಚ್ಚರಿಕೆ ನೀಡಿದ್ದಾರೆ.

ವೀರಶೈವ ಎಂಬುದು ಹಿಂದು ಧರ್ಮದಲ್ಲಿ ಶೈವ ಪಂಥದಲ್ಲೇ ಬರುತ್ತದೆ. ಲಿಂಗಾಯತ ಬೇರೆ ವೀರಶೈವ ಬೇರೆ. ಇವೆರಡು ಕೂಡಲು ಸಾಧ್ಯವಿಲ್ಲ. ಇದು ಎಣ್ಣೆ ನೀರು ಇದ್ದ ಹಾಗೇ ಅಂತಾ ತೋಂಟದಾರ್ಯ ಶ್ರೀಗಳು ಸಭೆಯಲ್ಲಿ ಪ್ರಸ್ತಾಪಿಸಿದರು.

ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಿ ಎಂದು ಪ್ರಸ್ತಾವನೆ ಸಲ್ಲಿಸಿದರೆ ಮಾತ್ರ ಕಾನೂನಿನ ಮಾನ್ಯತೆ ಸಿಗಲಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಶಿವಾನಂದ ಜಾಮ್ದಾರ ವಾದ ಮಂಡಿಸಿದರು.

ವೀರಶೈವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಲಿಂಗಾಯತ ಅಂತಾನೇ ಪ್ರತ್ಯೇಕ ಧರ್ಮ ಮಾನ್ಯತೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಣಯಿಸಿತು.

ಸಭೆಯಲ್ಲಿ ಸಚಿವ ಎಂ.ಬಿ ಪಾಟೀಲ್, ಶರಣು ಪ್ರಕಾಶ್ ಪಾಟೀಲ್, ವಿನಯ ಕುಲಕರ್ಣಿ, ಬಸವರಾಜ್ ರಾಯರೆಡ್ಡಿ, ಮಾಜಿ ಸಚಿವ ಬಸವರಾಜ್ ಹೊರಟ್ಟಿ, ಸಂಸದ ಪ್ರಕಾಶ್ ಹುಕ್ಕೇರಿ, ಶಾಸಕ ಅಸೋಕ್ ಪಟ್ಟಣ್ ಸೇರಿದಂತೆ ಮುರುಘಾ ಮಠದ ಶ್ರೀಗಳು, ತೋಂಟದಾರ್ಯ ಶ್ರೀಗಳು ಹಾಗೂ ಇಳಕಲ್ ಮಾಹಂತೇಶ ಸ್ವಾಮೀಜಿ ಹಾಗೂ ಹಲವು ಮಠಾಧೀಶರು ಭಾಗವಹಿಸಿದರು.

ಸಭೆ ಬಳಿಕ ಮಠಾಧೀಶರು ಹಾಗೂ ಮುಖಂಡರ ನಿಯೋಗ ಸಿಎಂ ನಿವಾಸಕ್ಕೆ ತೆರಳಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಲು ಪ್ರಸ್ತಾವನೆ ಸಲ್ಲಿಸಿತು. ಸಭೆಗೆ ವೀರಶೈವ ಮಹಾಸಭಾದ ಮುಖಂಡರು ಮಾತ್ರ ಯಾರು ಪಾಲ್ಗೊಂಡಿರಲಿಲ್ಲ.

ಸಭೆಯ ನಿರ್ಣಯಗಳು ಹೀಗಿವೆ
1. ಬಸವಣ್ಣ ಸ್ಥಾಪಿಸಿದ ಐತಿಹಾಸಿಕ ಸಿದ್ದಾಂತ, ವಚನಗಳನ್ನು ವೀರಶೈವರು ಬಳಸಬಾರದು.
2. ಬಸವಾದಿ ತತ್ವಗಳನ್ನು ವಿರಕ್ತ ಮಠಗಳ ಮಠಾಧೀಶರು ಧರ್ಮಪ್ರಚಾರದ ಮೂಲಕ ಲೋಕಕ್ಕೆ ತಲುಪಿಸಬೇಕು,ಇಲ್ಲವೇ ಪೀಠ ತ್ಯಜಿಸಬೇಕು.
3. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ.

4. ಲಿಂಗಾಯತ ಧರ್ಮವನ್ನು ಬಸವಣ್ಣ ಸ್ಥಾಪಿಸಿದ್ದಾರೆ.ಅವರೇ ಧರ್ಮಸ್ಥಾಪಕರು. ವಚನಗಳೇ ಧರ್ಮಗ್ರಂಥ.
5. 1941ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ಸಮಾವೇಶದಲ್ಲಿ ಅಖಿಲ ಭಾರತ ಲಿಂಗಾಯತ ಮಹಾಸಭಾ ಎಂದು ಹೆಸರು ಬದಲಿಸುವ ನಿರ್ಣಯ ಕೈಗೊಂಡುದ್ದು, ಅದು ಜಾರಿಗೆ ಆಗ್ರಹ.

Comments

Leave a Reply

Your email address will not be published. Required fields are marked *