ಬೆಂಗಳೂರಿನಲ್ಲಿ ಹೆಚ್1ಎನ್1 ಮಹಾಮಾರಿ ಅಬ್ಬರ-ರಾಜ್ಯಾದ್ಯಂತ ಹೈ ಅಲರ್ಟ್

ಬೆಂಗಳೂರು: ನಗರದಲ್ಲಿ ಹೆಚ್1 ಎನ್1 ಪ್ರಕರಣಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ. ಮಹಾಮಳೆಯ ಬೆನ್ನೆಲ್ಲೆ ಸಾಂಕ್ರಾಮಿಕ ರೋಗದ ಪ್ರಕರಣಗಳು ಕಳೆದ ಒಂದು ವಾರದಿಂದ ಹೆಚ್ಚಾಗುತ್ತಿವೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಆರೋಗ್ಯಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ನಗರದಲ್ಲಿಯೇ ಇದೂವರೆಗೂ 46 ಹೆಚ್1 ಎನ್1 ಪ್ರಕರಣಗಳು ದಾಖಲಾಗಿವೆ. ಮಹದೇವಪುರ, ಮಾರತಹಳ್ಳಿ, ಕಾಡುಗೋಡಿ ಸೇರಿದಂತೆ ಕೇರಳಕ್ಕೆ ಹೋಗಿ ಬಂದವರಲ್ಲಿ ಹೆಚ್ಚಾಗಿ ಹೆಚ್1 ಎನ್1 ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಖಾಸಗಿ ಹಾಗೂ ಸರ್ಕಾರಿ ಅಸ್ಪತ್ರೆಗಳಿಗೆ ಮುಂಜಾಗೃತೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಬಗ್ಗೆ ದಿನನಿತ್ಯದ ವರದಿ ಸಲ್ಲಿಸುವಿಕೆ, ಔಷಧಗಳ ಸಂಗ್ರಹಣೆ ಮಾಡಿಕೊಳ್ಳುವಂತೆ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

ಕೇರಳದತ್ತ ಪ್ರಯಾಣಿಸುವವರು ಮುಂಜಾಗ್ರತ ಕ್ರಮಕೈಗೊಳ್ಳಬೇಕು. ಕೇರಳದಲ್ಲಿ ಉಂಟಾದ ಜಲಪ್ರಳಯದ ಬಳಿಕ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಹಾಗಾಗಿ ಕೇರಳ ಪ್ರವಾಸಕೈಗೊಳ್ಳುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ. ಹೆಚ್1 ಎನ್1 46, ಡೆಂಗ್ಯೂ 20 ಮತ್ತು ಚಿಕುನುಗುನ್ಯಾ 23 ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *