ವಿಧಾನ ಪರಿಷತ್ ಕಲಾಪದಲ್ಲಿ 40% ಕಮಿಷನ್ ಜಟಾಪಟಿ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‍ನಲ್ಲಿಂದು ಗುತ್ತಿಗೆದಾರರಿಂದ ಶೇ.40ರ ಕಮೀಷನ್ ಪಡೆಯುತ್ತಿರುವ ಆರೋಪ ಕುರಿತ ವಿಚಾರವಾಗಿ ಇವತ್ತು ಗದ್ದಲ ಗಲಾಟೆಗೆ ಕಾರಣವಾಯ್ತು.

ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ಗುತ್ತಿಗೆದಾರರಿಂದ 40 ಪಸೆರ್ಂಟ್ ಕಮೀಷನ್ ಪಡೆಯುವುದು ಇನ್ನು ನಿಂತಿಲ್ಲ ಎನ್ನುವ ಕುರಿತು ಗುತ್ತಿಗೆದಾರರ ಸಂಘ ಮಾಡಿರುವ ಆರೋಪದ ಕುರಿತು ಮಾಧ್ಯಮಗಳ ವರದಿ ಉಲ್ಲೇಖಿಸಿ ಈ ಬಗ್ಗೆ ತನಿಖೆ ಆಗಬೇಕು ಎಂದು ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಒತ್ತಾಯಿಸಿದರು. ಇದನ್ನೂ ಓದಿ: 5.21 ಲಕ್ಷ ಮನೆ ಉದ್ಘಾಟನೆ, ಬಡವರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ: ಮೋದಿ

ಸರ್ಕಾರದ ಪರ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ, ನಿನ್ನೆ ಸದನ ಮುಗಿದು ಇವತ್ತು ಸದನ ಶುರುವಾಗುವ ಮೊದಲು ಆದ ಘಟನೆಗಳ ಬಗ್ಗೆ ಮಾತ್ರ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಬೇಕು. ಆದರೆ ಮಾಧ್ಯಮಗಳ ವರದಿ ಆಧರಿಸಿ ಆರೋಪ ಮಾಡುತ್ತಿದ್ದಾರೆ. ಯಾವ ಸಚಿವರು, ಶಾಸಕರು ಗುತ್ತಿಗೆದಾರರಿಂದ ಕಮೀಷನ್ ಪಡೆದಿದ್ದಾರೆ ಎಂದು ನಿಖರವಾಗಿ ಹೇಳಬೇಕು. ಪತ್ರಿಕೆಗಳಲ್ಲಿ ಬಂದಿದ್ದನ್ನೆಲ್ಲಾ ಇಲ್ಲಿ ತಂದು ಹೇಳುವಂತಿಲ್ಲ ಅಂತ ವಿರೋಧ ಮಾಡಿದರು.

ಇಂತಹ ವಿಷಯ ಶೂನ್ಯವೇಳೆಯಲ್ಲಿ ತರಬಾರದು. ರಾಥೋಡ್‍ನನ್ನ ಬಳಿ 50 ಸಾವಿರ ಕೇಳಿದರು ಅಂತಾ ಪತ್ರಿಕೆಗೆ ನಾನು ಹೇಳಿದರೆ ಅದನ್ನೂ ಇಲ್ಲಿ ಚರ್ಚೆಗೆ ಅವಕಾಶ ನೀಡಲಾಗುತ್ತದೆಯಾ? ಎಂದು ಕಾಂಗ್ರೆಸ್ ಪ್ರಸ್ತಾವನೆಯನ್ನೇ ತಳ್ಳಿಹಾಕಿದರು.

ಈ ವೇಳೆ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, ಕಮೀಷನ್ ಪಡೆಯುವುದು ನಡೆದಿಲ್ಲ ಎಂದರೆ ಇಲ್ಲ ಎನ್ನಬೇಕು. ಚರ್ಚೆಗೆ ತರುವುದು ನಮ್ಮ ಕರ್ತವ್ಯ ಎಂದು ಕಾಂಗ್ರೆಸ್ ಪ್ರಸ್ತಾಪವನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್‌

ಈ ವೇಳೆ ರಾಥೋಡ್ ಮಾತನಾಡಿ, ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ ಮಾತನಾಡಲು ಅವಕಾಶ ನೀಡಿ ಎಂದು ಬೇಡಿಕೆ ಇಟ್ಟರು. ಚರ್ಚೆಗೆ ಶೂನ್ಯವೇಳೆಯಲ್ಲಿ ಅವಕಾಶವಿಲ್ಲ ಎಂದು ಸಭಾಪತಿ ಅವಕಾಶ ನಿರಾಕರಿಸಿದರು.

ಈ ವೇಳೆ ಕೆಲಕಾಲ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯಪ್ರವೇಶ ಮಾಡಿ ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ ಎಂದು ತಿಳಿಸಿ ಪರಿಸ್ಥಿತಿ ನಿಯಂತ್ರಣ ಮಾಡಿದರು.

Comments

Leave a Reply

Your email address will not be published. Required fields are marked *