ನಾಲ್ವರು ಉಗ್ರರಿಂದ ಐಟಿ ಕಂಪನಿ ಮೇಲೆ ದಾಳಿ – ಸುಳ್ಳು ವದಂತಿಯೆಂದ ಬೆಂಗ್ಳೂರು ಪೊಲೀಸರು

ಬೆಂಗಳೂರು: ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟವಾದ ಬಳಿಕ ನಾಲ್ವರು ಉಗ್ರರು ಬೆಂಗಳೂರಿಗೆ ಬಂದಿದ್ದಾರೆ ಎನ್ನುವ ಸುದ್ದಿ ಸುಳ್ಳು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕರು ಈ ತರಹದ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ. ಈ ತರಹದ ಸುಳ್ಳು ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬೇಡಿ. ಸುಳ್ಳು ವದಂತಿಗಳನ್ನ ನಂಬಬೇಡಿ ಮತ್ತು ಪ್ರೋತ್ಸಾಹಿಸಬೇಡಿ ಎಂದು ಬೆಂಗಳೂರು ನಗರ ಪೊಲೀಸ್ ಟ್ವೀಟ್ ಮಾಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಲಂಕಾದಲ್ಲಿ ಬಾಂಬ್ ಸ್ಫೋಟದಲ್ಲಿ 253 ಮಂದಿ ಬಲಿಯಾದ ಬೆನ್ನಲ್ಲೇ ದಕ್ಷಿಣ ಭಾರತದಲ್ಲಿ ಉಗ್ರ ದಾಳಿಯ ಆತಂಕ ಎದುರಾಗಿದೆ. ದಕ್ಷಿಣದ 8 ರಾಜ್ಯಗಳಿಗೆ 19 ಮಂದಿ ಉಗ್ರರು ನುಸುಳಲಿದ್ದಾರೆ ಎನ್ನುವ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಮೆಸೆಜ್‍ನಲ್ಲಿ ಏನಿತ್ತು?
ಬೆಂಗಳೂರಿಗೆ 4 ಮಂದಿ ಉಗ್ರರು ನುಸುಳಿದ್ದಾರೆ. ಅವರು ಇನ್ನೂ 15 ದಿನಗಳ ಒಳಗಡೆ ಭಾರಿ ಅಪಾಯಕಾರಿ ಕೆಲಸವನ್ನು ಮಾಡಲಿದ್ದಾರೆ. ರಾಜಧಾನಿಯ ವೈಟ್‍ಫೀಲ್ಡ್ ಹಾಗೂ ಬೆಳ್ಳಂದೂರು ಪ್ರದೇಶಗಳಲ್ಲಿರುವ ಐಟಿ ಕಂಪನಿಗಳ ಮೇಲೆ ದಾಳಿ ಮಾಡಲು ಸಂಚು ಮಾಡಿದ್ದಾರೆ. ಆದ್ದರಿಂದ ಈ ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳು ಎಚ್ಚರಿಕೆಯಿಂದ ಇರಿ ಹಾಗೂ ಅನುಮಾನಸ್ಪದ ವ್ಯಕ್ತಿಗಳು ಅಥವಾ ಈ ಫೋಟೋದಲ್ಲಿ ಕಾಣುವ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಂದು ಬರೆದು, ಕೆಲ ಅಪರಿಚಿತರ ಫೋಟೋ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.

ಈ ಸಂದೇಶವನ್ನು ನೋಡಿದವರು ನಿಜವೆಂದು ನಂಬಿದ್ದರು. ಆದ್ರೆ ಈಗ ಸ್ವತಃ ಬೆಂಗಳೂರು ನಗರ ಪೊಲೀಸರೇ ಈ ಸುದ್ದಿ ಸುಳ್ಳು. ಇಂತಹದನ್ನು ನಂಬಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *