ಕತ್ತು ಕೊಯ್ದ ಸ್ಥಿತಿಯಲ್ಲಿ ಹೆಣವಾದ್ಳು 4 ತಿಂಗಳ ಗರ್ಭಿಣಿ..!

ವಿಜಯಪುರ: ದೀಪ ಬೆಳಗುವ ದಿನದಂದು ಮನೆಯ ದೀಪವೊಂದು ಆರಿ ಹೋಗಿದೆ. ನಾಲ್ಕು ತಿಂಗಳ ಗರ್ಭಿಣಿ ಪ್ರೀತಿಸಿ ಮದುವೆಯಾದ ಕಾರಣ ಮಂಗಳವಾರ ಮರ್ಯಾದಾ ಹತ್ಯೆಗೆ ಬಲಿಯಾದ ಹೃದಯ ವಿದ್ರಾವಕ ಘಟನೆ ವಿಜಯಪುರದಲ್ಲಿ ನಡೆದಿದೆ.

ರೇಣುಕಾ ಬರ್ಬರವಾಗಿ ಹತ್ಯೆಯಾದ ಗರ್ಭಿಣಿ. ರೇಣುಕಾ ಮೂಲತಃ ರಾಯಚೂರಿನ ಕ್ಯಾದಿಗೇರಿ ಗ್ರಾಮದವಳು. ಎರಡು ವರ್ಷದ ಹಿಂದೆ ಕ್ಯಾದಿಗೇರಿ ಗ್ರಾಮದ ಪಕ್ಕದಲ್ಲಿರುವ ಶಿರವಾರ ಗ್ರಾಮದ ಶಂಕರ್ ಜೊತೆ ಪ್ರೀತಿಸಿ ಮನೆ ಬಿಟ್ಟು ಇಬ್ಬರು ಓಡಿ ಬಂದು ಮದುವೆ ಆಗಿ ವಿಜಯಪುರ ಜಿಲ್ಲೆಯ ನಿಡಗುಂದು ತಾಲೂಕಿನ ಯಲಗೂರು ಗ್ರಾಮದಲ್ಲಿ ವಾಸವಾಗಿದ್ದರು.

ಇವರಿಬ್ಬರ ಪ್ರೀತಿಗೆ ಅಂತರ್ ಜಾತಿಯೇ ಮುಳುವಾದ ಕಾರಣ ಓಡಿ ಬಂದು ಇಲ್ಲಿ ವಾಸವಾಗಿದ್ದರು. ಮೊಬೈಲ್ ಅಂಗಡಿವೊಂದರಲ್ಲಿ ಕೆಲಸ ಮಾಡುತ್ತ ಇಬ್ಬರು ಎರಡು ವರ್ಷ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದರು. ಆದರೆ ಅದ್ಯಾರ ದೃಷ್ಟಿ ತಗುಲಿತು ಗೊತ್ತಿಲ್ಲ. ಮಂಗಳವಾರ ರೇಣುಕಾ ಕತ್ತು ಕೊಯ್ದ ಸ್ಥಿತಿಯಲ್ಲಿ ಹೆಣವಾಗಿದ್ದಾಳೆ.

ಕಳೆದ ನಾಲ್ಕು ತಿಂಗಳ ಹಿಂದೆ ತಾಯಿಯ ನೆನಪಾಗ್ತಿದೆ ಅಂತಾ ರೇಣುಕಾ ತನ್ನ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾಳೆ. ನಂತರ ಕಳೆದ ಒಂದು ವಾರದ ಹಿಂದೆ ರೇಣುಕಾ ತಾಯಿ, ಸಹೋದರ ಮತ್ತು ತಂಗಿಯ ಗಂಡ ಯಲಗೂರಿನ ಮನೆಗೆ ಬಂದು ಟಿಕಾಣಿ ಹೂಡಿದ್ದರು. ಅಲ್ಲದೆ ರೇಣುಕಾ ತಾಯಿ ಗರ್ಭಿಣಿಯಾಗಿದ್ಯಾ ಊರಿಗೆ ಬಾ, ಇಲ್ಲೇ ಹೆರಿಗೆ ಮಾಡಿಸೋಣ ಅಂತಾನೂ ಹೇಳಿದ್ದರು. ಆಗ ರೇಣುಕಾಗೆ ಶಂಕರ್ ನೋಡು ನನಗೆ ಯಾಕೋ ಸರಿ ಅನಿಸುತ್ತಿಲ್ಲ ಅಂತಾ ಎಚ್ಚರಿಸಿದ್ದನು. ಅಷ್ಟರಲ್ಲೇ ಮಂಗಳವಾರ ತಾನು ಕೆಲಸಕ್ಕೆ ಹೋದಾಗ ಈ ಘಟನೆ ನಡೆದು ಹೋಗಿದೆ ಅಂತಾ ಶಂಕರ್ ಹೆಂಡತಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾನೆ.

ಘಟನೆಯ ನಂತರ ರೇಣುಕಾ ತಾಯಿ, ಸಹೋದರ ಮತ್ತು ತಂಗಿ ಗಂಡ ಪರಾರಿಯಾಗಿದ್ದಾರೆ ಅಂತಾ ಶಂಕರ್ ಆರೋಪಿಸುತ್ತಿದ್ದಾನೆ. ಸದ್ಯ ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆಯ ನಂತರ ಸತ್ಯಾಸತ್ಯತೆ ಹೊರ ಬೀಳಲಿದೆ. ಸದ್ಯ ಮೇಲ್ನೋಟಕ್ಕೆ ಇದೊಂದು ಮರ್ಯಾದಾ ಹತ್ಯೆ ಎಂದು ಕಂಡುಬರುತ್ತಿದ್ದು, ಪೊಲೀಸರ ತನಿಖೆಯ ನಂತರ ಸತ್ಯ ಹೊರಬಿಳಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *