ಮನೆ ಮುಂದೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು!

ನವದೆಹಲಿ: ವ್ಯಕ್ತಿಯೋರ್ವನ ಮೇಲೆ ನಾಲ್ವರು ದುಷ್ಕರ್ಮಿಗಳು ಮನೆ ಮುಂದೆಯೇ ಬಂದು ಏಕಾಏಕಿ ಗುಂಡು ಹಾರಿಸಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಶುಕ್ರವಾರದ ಸಂಜೆ ಹೊತ್ತಿಗೆ ದೆಹಲಿಯ ಸೆಕ್ಟರ್-11ರ ರೋಹಿಣಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೂಲತಃ ದೆಹಲಿಯ ಖೇದಾ ಖರ್ದ್ ಗ್ರಾಮದವರಾದ ಮನೀಶ್ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಸಹೋದ್ಯೊಗಿಗಳ ಜೊತೆ ಹೊರಗಡೆ ಹೊರಟಿದ್ದ ಮನೀಶ್ ಕಾರನ್ನು ದುಷ್ಕರ್ಮಿಗಳು ಮತ್ತೊಂದು ವಾಹನದಲ್ಲಿ ಬಂದು ರೋಹಿಣಿ ಪ್ರದೇಶದಲ್ಲಿ ಅಡ್ಡಗಟ್ಟಿದ್ದರು. ಈ ವೇಳೆ ಕಾರಿನಿಂದ ಮನೀಶ್ ಇಳಿದು ಕೆಳಗೆ ಬಂದ ಮೇಲೆ ನಾಲ್ವರು ದುಷ್ಕರ್ಮಿಗಳು ಒಬ್ಬರ ಹಿಂದೆ ಒಬ್ಬರಂತೆ ಬಂದು ಮನೀಶ್ ಮೇಲೆ ಗುಂಡು ಹಾರಿಸಿದ್ದಾರೆ.

ಆರೋಪಿಗಳು ಮನೀಶ್ ಮೇಲೆ ದಾಳಿ ಮಾಡಿರುವ ದೃಶ್ಯಾವಳಿಗಳು ಘಟನಾ ಸ್ಥಳದಲ್ಲಿದ್ದ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಗುಂಡೇಟು ತಿಂದಿರುವ ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಡಿಯೋದಲ್ಲಿ ಗಮನಿಸಿದರೆ ಮೊದಲು ಇಬ್ಬರು ವ್ಯಕ್ತಿಗಳು ಮನೀಶ್ ಬಳಿ ಬಂದು ಗುಂಡು ಹೊಡೆಯುತ್ತಾರೆ. ಅವರ ಹಿಂದೆಯೇ ಇನ್ನಿಬ್ಬರು ಸಾಲಾಗಿ ಬಂದು ಗುಂಡು ಹಾರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಘಟನೆಯನ್ನು ಕಂಡು ತಮ್ಮ ಮನೆಯ ಗೇಟ್ ಮುಚ್ಚಿ ಭಯದಿಂದ ಮನೆಯೊಳಗೆ ಹೋದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Comments

Leave a Reply

Your email address will not be published. Required fields are marked *