ಇಡೀ ರಾತ್ರಿ ಬೆಂಗ್ಳೂರು ಸುತ್ತಿಸಿ ಒಲಾ ಚಾಲಕನನ್ನು ಕೂಡಿ ಹಾಕಿ 20 ಸಾವಿರ ದರೋಡೆ!

ರಾಮನಗರ: ಬೆಂಗಳೂರಿನ ಆಡುಗೋಡಿಯಿಂದ ದಮ್ಮಸಂದ್ರಕ್ಕೆ ಓಲಾ ಕ್ಯಾಬ್ ಬುಕ್ ಮಾಡಿದ ನಾಲ್ವರು ಖದೀಮರು ಕ್ಯಾಬ್ ಚಾಲಕನನ್ನು ಬೆದರಿಸಿ ಹಣವನ್ನು ದರೋಡೆ ಮಾಡಿದ್ದಾರೆ.

ಸೋಮಶೇಖರ್ ಎಂಬವರ ಕಾರನ್ನು ನಾಲ್ವರು ವ್ಯಕ್ತಿಗಳು ಬುಕ್ ಮಾಡಿದ್ದರು. ಶುಕ್ರವಾರ ಆಡುಗೋಡಿಯಲ್ಲಿ ಹತ್ತಿದ ಆ ನಾಲ್ವರು ಪ್ರಯಾಣಿಕರು ಕ್ಯಾಬ್ ಚಾಲಕನಿಗೆ ಚಾಕು ತೋರಿಸಿ ಬೆದರಿಸಿ ಇಡೀ ರಾತ್ರಿ ಬೆಂಗಳೂರನ್ನು ಸುತ್ತಿಸಿದ್ದಾರೆ. ಅಷ್ಟೇ ಅಲ್ಲದೇ ಚಾಲಕನ ಎಟಿಎಂ ಕಾರ್ಡ್ ಮೂಲಕ 20 ಸಾವಿರ ಹಣವನ್ನು ಡ್ರಾ ಮಾಡಿಸಿಕೊಂಡಿದ್ದಾರೆ.

ಸೋಮಶೇಖರ್ ಅವರನ್ನು ಬೆದರಿಸಿ ದರೋಡೆ ಮಾಡಿದ್ದು ಅಲ್ಲದೇ ಅವರ ಮೊಬೈಲ್‍ನಿಂದ ಪತ್ನಿಗೆ ವಿಡಿಯೋ ಕಾಲ್ ಕೂಡ ಮಾಡಿಸಿದ್ದರು. ದುಷ್ಕರ್ಮಿಗಳು ರಾತ್ರಿ ಬೆಂಗಳೂರಿನಿಂದ ಬಿಡದಿ, ರಾಮನಗರ ಮಾರ್ಗವಾಗಿ ಚನ್ನಪಟ್ಟಣಕ್ಕೆ ಕ್ಯಾಬ್‍ನಲ್ಲಿಯೇ ಚಾಲಕನನ್ನು ಕರೆದುಕೊಂಡು ಬಂದಿದ್ದಾರೆ. ಆ ನಂತರ ಇಂದು ಬೆಳಗ್ಗೆ ಚನ್ನಪಟ್ಟಣದ ಆನಂದ್ ಲಾಡ್ಜ್ ನಲ್ಲಿ ರೂಂ ಮಾಡಿ ಕ್ಯಾಬ್ ಚಾಲಕನನ್ನು ಕೂಡಿ ಹಾಕಿದ್ದಾರೆ. ಬಳಿಕ ಚಾಲಕ  ಲಾಡ್ಜ್ ನ ಕಿಟಕಿ ಹಾರಿ ದುಷ್ಕರ್ಮಿಗಳಿಂದ ತಪ್ಪಿಕೊಂಡು ಸ್ಥಳಿಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಚಾಲಕ ತಪ್ಪಿಸಿಕೊಂಡ ನಂತರ ದರೋಡೆಕೋರರು ಲಾಡ್ಜ್ ನಿಂದ  ಎಸ್ಕೇಪ್ ಆಗಿದ್ದಾರೆ. ಈ ಕುರಿತು ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *