500 ಅಡಿ ಪ್ರಪಾತಕ್ಕೆ ಬಿದ್ದ ಟೂರಿಸ್ಟ್ ಬಸ್ – ನಾಲ್ವರು ಬೆಂಗ್ಳೂರಿಗರ ದುರ್ಮರಣ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರಿನ ಟೂರಿಸ್ಟ್ ಬಸ್ ಸುಮಾರು 500 ಅಡಿ ಪ್ರಪಾತಕ್ಕೆ ಬಿದ್ದ ಪರಿಣಾಮ ನಾಲ್ವರು ಬೆಂಗಳೂರಿಗರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಮಿಳುನಾಡಿನ ಊಟಿ ಬಳಿ ನಡೆದಿದೆ.

ಈ ಅವಘಡದಿಂದ ಸುಮಾರು 10 ಕ್ಕೂ ಹೆಚ್ವು ಪ್ರವಾಸಿಗರಿಗೆ ಗಂಭೀರ ಗಾಯವಾಗಿದೆ. ಖಾಸಗಿ ಬಸ್ಸಿನಲ್ಲಿ ಬೆಂಗಳೂರಿನ ತಿಂಡ್ಲುವಿನ ನಿವಾಸಿಗಳು ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.

ಸಂಘದ ಸದಸ್ಯರು ಬೆಂಗಳೂರಿನ ಟ್ರ್ಯಾವೆಲ್ಸ್ ಗೆ ಸೇರಿದ ಈ ಬಸ್ ನಲ್ಲಿ ಪ್ರವಾಸ ಕೈಗೊಂಡಿದ್ದರು. ಪ್ರವಾಸಕ್ಕೆಂದು ನಾಲ್ಕು ಜನ ಮಕ್ಕಳು, ಅಡುಗೆ ಭಟ್ರು ಸೇರಿ ಒಟ್ಟು 30 ಜನ ಮಹಿಳೆಯರು ತೆರಳಿದ್ದರು. ಹೀಗೆ ಸುಮಾರು 30 ಜನರು ಶುಕ್ರವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಊಟಿಗೆ ತೆರಳಿದ್ದರು. ಊಟಿ, ಮಡಿಕೇರಿ ಪ್ರವಾಸ ಮುಗಿಸಿ ನಾಳೆ ರಾತ್ರಿ ಬೆಂಗಳೂರಿಗೆ ಆಗಮಿಸಬೇಕಿತ್ತು.

ಶನಿವಾರ ಊಟಿಯಲ್ಲಿ ಸ್ಥಳೀಯ ದೃಶ್ಯ ವೀಕ್ಷಣೆ ಮುಗಿಸಿ ಮಡಿಕೇರಿಯತ್ತ ಪ್ರಯಾಣ ಬೆಳೆಸಿದ್ದರು. ಆದರೆ ರಾತ್ರಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರು ಊಟಿಯತ್ತ ದೌಡಾಯಿಸಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಯಳುಗಳನ್ನು ನಡುವಾತಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನಡೆದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಘಟನೆ ಸಂಬಂಧ ಕುಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೋಲೀಸರು ಕಾರ್ಯಚರಣೆಯನ್ನು ಮುಂದುವರಿಸಿದ್ದು, ಇನ್ನು ಸಾವಿನ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

Comments

Leave a Reply

Your email address will not be published. Required fields are marked *