ಪೇದೆ ಕೊಲೆಗೈದಿದ್ದ 3 ಉಗ್ರರ ಎನ್‍ಕೌಂಟರ್ – ಮುಂದುವರಿದ ಕಾರ್ಯಾಚರಣೆ

ಶ್ರೀನಗರ: ಜಮ್ಮು-ಕಾಶ್ಮೀರದ ಪೊಲೀಸ್ ಪೇದೆಯನ್ನು ಅಪಹರಿಸಿ ಕೊಲೆಗೈದಿದ್ದ ಮೂವರು ಉಗ್ರರನ್ನು ಭಾರತೀಯ ಯೋಧರು ಎನ್‍ಕೌಂಟರ್ ಮಾಡಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಕಾಶ್ಮೀರ ಕುಲ್ಗಾವ್ ಜಿಲ್ಲೆಯ ಪೊಲೀಸ್ ಪೇದೆ ಸಲೀಂ ಅಹಮ್ಮದ್ ಶಾಹರನ್ನು ಹತ್ಯೆ ಮಾಡಲಾಗಿದ್ದ ಮೂರು ಕಿ.ಮೀ ದೂರದಲ್ಲಿ ಕಾರ್ಯಾಚರಣೆ ನಡೆದಿದ್ದು, ಹತ್ಯೆಯಾದ ಉಗ್ರರಲ್ಲಿ ಒಬ್ಬ ಪಾಕಿಸ್ತಾನ ಮೂಲದವನು ಎಂಬ ಅನುಮಾನವನ್ನು ಸೇನೆ ವಕ್ತಾರರು ವ್ಯಕ್ತಪಡಿಸಿದ್ದಾರೆ.

ಕೇಂದ್ರ ಮೀಸಲು ಪಡೆ ಹಾಗೂ ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಂದು ಮುಂಜಾನೆ ಎನ್‍ಕೌಂಟರ್ ಮಾಡಲಾಗಿದೆ. ಈ ವೇಳೆ ಉಗ್ರರ ಬಳಿ ಇದ್ದ ಎಕೆ47 ಗನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿಯ ವೇಳೆ ಸಾವನ್ನಪ್ಪಿದ ಉಗ್ರರಲ್ಲಿ ಓರ್ವ ಲಷ್ಕರ್-ಎ-ತೊಯ್ಬಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಉಳಿದ ಇಬ್ಬರು ಕಾಶ್ಮೀರದ ಮೂಲದ ಉಗ್ರರು ಎಂದು ಡಿಸಿಪಿ ಶೇಷ್ ಪಾಲ್ ವೈಡ್ ತಿಳಿಸಿದ್ದಾರೆ.

ಗುಪ್ತಚರ ಇಲಾಖೆ ಮಾಹಿತಿ ಅನ್ವಯ ಉಗ್ರರ ಹುಡುಕಾಟ ಕಾರ್ಯಾಚರಣೆ ಆರಂಭಿಸಿದ ಯೋಧರ ವಿರುದ್ಧ ಉಗ್ರರು ಮೊದಲು ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿಯಾಗಿ ಯೋಧರು ನಡೆಸಿದ ದಾಳಿಯಲ್ಲಿ ಉಗ್ರರು ಬಲಿಯಾಗಿದ್ದಾರೆ. ಕಾರ್ಯಾಚರಣೆ ಭಾಗವಾಗಿ ಕಾಶ್ಮೀರ ಕುಲ್ಗಾಮ್ ಹಾಗೂ ಅನಂತನಾಗ್ ಜಿಲ್ಲೆಗಳಲ್ಲಿ ಮೊಬೈಲ್ ನೆಟ್ ವರ್ಕ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಈದ್ ಸಂಭ್ರಮದಲ್ಲಿ ಭಾಗಹಿಸಲು ಮನೆಗೆ ತೆರಳುತ್ತಿದ್ದ ಕಾಶ್ಮೀರದ ಯೋಧನನ್ನು ಅಪಹರಣ ಮಾಡಿ ಉಗ್ರರು ಕೊಲೆ ಮಾಡಿದ್ದರು. ಬಳಿಕ ಎರಡು ದಿನಗಳ ಹಿಂದೆಯಷ್ಟೇ ರಜೆಯ ಮೇಲೆ ಮನೆಗೆ ತೆರಳಿದ್ದ ಪೊಲೀಸ್ ಪೇದೆಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು.

Comments

Leave a Reply

Your email address will not be published. Required fields are marked *