ಮುಖಕ್ಕೆ ಮೆತ್ತಿದ್ದ ಕೇಕ್ ತೊಳೆಯಲು ಹೋಗಿ ನೇತ್ರಾವತಿ ನದಿಯಲ್ಲಿ ಯುವಕ ಸಾವು

-ರಕ್ಷಿಸಲು ಹೋದ ಇಬ್ಬರು ವಿದ್ಯಾರ್ಥಿಗಳು ದುರ್ಮರಣ

ಮಂಗಳೂರು: ನೇತ್ರಾವತಿ ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.

ಮಹಮ್ಮದ್ ಸುಹೈದ್, ಸಹೀರ್ ಹಾಗೂ ಫಿರ್ಝಾನ್ ಮೃತಪಟ್ಟ ವಿದ್ಯಾರ್ಥಿಗಳು. ಮೂವರು ವಿದ್ಯಾರ್ಥಿಗಳು ಉಪ್ಪಿನಂಗಡಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು. ಮೂವರು ವಿದ್ಯಾರ್ಥಿಗಳು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದರು.

ಸುಹೈದ್ ತನ್ನ ಹುಟ್ಟುಹಬ್ಬದ ಬಳಿಕ ಮುಖಕ್ಕೆ ಮೆತ್ತಿದ್ದ ಕೇಕ್ ತೊಳೆಯಲು ನದಿಗೆ ಇಳಿದಿದ್ದನು. ಸುಹೈದ್ ನದಿಗೆ ಇಳಿದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ನದಿಗೆ ಹಾರಿದ್ದ ಇನ್ನಿಬ್ಬರು ವಿದ್ಯಾರ್ಥಿಗಳು ಕೂಡ ಮೃತಪಟ್ಟಿದ್ದಾರೆ.

ನೇತ್ರಾವತಿ ನದಿ ಪಕ್ಕದಲ್ಲಿ ಸುಹೈದ್ ಮನೆಯಿದ್ದು, ಇಂದು ಬೆಳಗ್ಗೆ ಆತನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಈ ವೇಳೆ ಸಹೀರ್ ಹಾಗೂ ಫಿರ್ಝಾನ್ ಅವರನ್ನು ನದಿಯಲ್ಲಿ ಹುಡುಕಾಟ ನಡೆಸುವಾಗ ಅವರ ಮೃತದೇಹ ಕೂಡ ಪತ್ತೆಯಾಗಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *