ಹೈವೇ ನಿರ್ಮಾಣದ ವೇಳೆ ಮಣ್ಣಿನ ಗುಡ್ಡ ಕುಸಿದು 3 ಕಾರ್ಮಿಕರ ದುರ್ಮರಣ!

ಬೆಳಗಾವಿ: ರಸ್ತೆಗೆ ಸೇತುವೆ ನಿರ್ಮಿಸಲು ಹಾಕಿದ್ದ ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ದೇಸೂರ ಗ್ರಾಮದ ಬಳಿ ನಡೆದಿದೆ.

ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ವೇಳೆ ರಸ್ತೆಗೆ ಸೇತುವೆ ನಿರ್ಮಾಣ ಮಾಡಲು ಹಾಕಿದ್ದ ಮಣ್ಣು ಕುಸಿದು ಅವಘಡ ಸಂಭವಿಸಿದೆ. ಜಾರ್ಖಂಡ್ ಮೂಲದ ದುರ್ಗೇಶ್, ಅರ್ಜುನ್ ಹಾಗೂ ಸುಖಾನ್ ಮೃತ ಕಾರ್ಮಿಕರು ಎಂದು ಗುರುತಿಸಲಾಗಿದೆ.

ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಸಿಬ್ಬಂದಿ ಜೊತೆಗೆ ಕಾರ್ಮಿಕರು ಕೈಜೋಡಿಸಿ ಮಣ್ಣಿನ ಕೆಳಗೆ ಸಿಲುಕಿದ್ದ ಮೂರು ಶವಗಳನ್ನು ಹೊರ ತೆಗೆದಿದ್ದಾರೆ.

ಅಶೋಕಾ ಕಂಪನಿಯಿಂದ ರಸ್ತೆ ನಿರ್ಮಾಣ ಕೆಲಸ ಮಾಡಿಸಲಾಗುತ್ತಿತ್ತು. ಅಲ್ಲದೆ ಎಂಜಿನಿಯರ್ ಅಚಾತುರ್ಯದಿಂದಲೇ ಹೀಗೆ ಆಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಸದ್ಯ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಡಿಸಿಪಿ ಸೀಮಾ ಲಾಟ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಮೃತ ಕಾರ್ಮಿಕರ ಶವವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

Comments

Leave a Reply

Your email address will not be published. Required fields are marked *