ಉದ್ಯಮಿಯನ್ನು ಪ್ರಜ್ಞೆ ತಪ್ಪಿಸಿ ದರೋಡೆಗೈದ ಸಹೋದರಿಯರು

ಲಕ್ನೋ: ಉದ್ಯಮಿಯೊಬ್ಬರನ್ನು ಪ್ರಜ್ಞೆ ತಪ್ಪಿಸಿ ನಂತರ ಮೂವರು ಸಹೋದರಿಯರು ಸೇರಿ ಅವನ ಹತ್ತಿರ ಇದ್ದ ದುಡ್ಡು ಮತ್ತು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

ಈ ಘಟನೆ ಶನಿವಾರ ನಡೆದಿದ್ದು, ಮೂರು ಜನ ಸಹೋದರಿಯರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಸಹೋದರಿಯರನ್ನು, ರಾಜಸ್ಥಾನದ ಬಿಕಾನೆರ್ ಮೂಲದ 25 ವರ್ಷದ ವಿಜಯಲಕ್ಷ್ಮಿ ಮತ್ತು ಅವಳ ಸಹೋದರಿ 21 ವರ್ಷದ ಕೃಷ್ಣ ಮತ್ತು ಇವರ ಸೋದರಸಂಬಂಧಿ ಬುಲಂದ್‍ಶಹರ್‍ ನ 27 ವರ್ಷದ ಸುನೀತಾ ಎಂದು ಗುರುತಿಸಲಾಗಿದೆ. ಇದರಲ್ಲಿ ಸುನೀತಾ ವಿಧವೆಯಾಗಿದ್ದು, ಈ ಹಿಂದೆ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಉಳಿದ ಇಬ್ಬರು ಆರೋಪಿಗಳು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ಪೊಲೀಸರು ಹೇಳುವ ಪ್ರಕಾರ, ಮಹಿಳೆಯರು ಮೊದಲು ಉದ್ಯಮಿಯೊಂದಿಗೆ ಸ್ನೇಹ ಬೆಳೆಸಿ ನಂತರ ಅವನನ್ನು ಹೋಟೆಲ್‍ಗೆ ಎಂದು ಕರೆದುಕೊಂಡು ಹೋಗಿ, ನಂತರ ಉದ್ಯಮಿಗೆ ಜಾಸ್ತಿ ಮದ್ಯಪಾನ ಮಾಡಿಸಿ ಪ್ರಜ್ಞೆ ತಪ್ಪಿಸಿ ನಂತರ ಅವನ ಹತ್ತಿರ ಇರುವ ಎಲ್ಲಾ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ಹೇಳಿದ್ದಾರೆ. ಬಂಧಿತ ಆರೋಪಿಗಳಿಂದ ಎರಡು ಮೊಬೈಲ್‍ಗಳು, ಎರಡು ವಾಚ್‍ಗಳು ಮತ್ತು ಉದ್ಯಮಿಯ ಕಾರಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ವೇಳೆ ಪೊಲೀಸ್ ವಿಚಾರಣೆಯಲ್ಲಿ ನಡೆದ ಘಟನೆಯನ್ನು ಒಪ್ಪಿಕೊಂಡಿರುವ ಸಹೋದರಿಯರು, ಉದ್ಯಮಿಯ ಕ್ರೆಡಿಟ್ ಕಾರ್ಡ್ ಬಳಸಿ 15,000 ರೂಪಾಯಿ ಹಣವನ್ನು ಎರಡು ಬಾರಿ ಡ್ರಾ ಮಾಡಿರುವುದಾಗಿ ಮತ್ತು ಅವರ ಡೆಬಿಟ್ ಕಾರ್ಡ್ ಬಳಸಿ 4,500 ರೂಗಳನ್ನು ಡ್ರಾ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

ಉದ್ಯಮಿಯೂ ಮದ್ಯಪಾನ ಮಾಡಿ ಪ್ರಜ್ಞಾಹೀನನಾಗಿದ್ದಾಗ, ನಾವು ಅವನ ಮೊಬೈಲ್ ಪಿನ್ ಪಡೆದುಕೊಂಡು ನಂತರ ಅವನ ಪೇಟಿಎಂ ಮೂಲಕ 26,000 ರೂಗಳನ್ನು ವಿವಿಧ ಮೂರು ನಂಬರ್ ಗೆ ವರ್ಗಾಯಿಸಿದ್ದೇವೆ. ನಂತರ ನಾವು ಕ್ಯಾಬ್ ಮಾಡಿಕೊಂಡು ಮನೆಗೆ ಹೋದೆವು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಈ ಹಿಂದೆಯೂ ಈ ಮೂವರು ಸಹೋದರಿಯರು ನಕಲಿ ಗುರುತಿನ ಚೀಟಿಗಳನ್ನು ತೋರಿಸುವ ಮೂಲಕ ಪ್ರವೇಶ ಶುಲ್ಕವಿಲ್ಲದೆ ಪಬ್‍ಗಳಿಗೆ ಹೋಗಿದ್ದ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಈ ಹಿಂದೆ ಈ ಮೂವರು ಸಹೋದರಿಯರು ಸೇರಿ ಹಲವಾರು ಪುರುಷರನ್ನು ಈ ರೀತಿಯಲ್ಲೇ ವಂಚನೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *