ಉದ್ಯಮಿ ರಾಜು ಹತ್ಯೆಗೆ 10 ಲಕ್ಷ ರೂ. ಸುಪಾರಿ ನೀಡಿದ ಎರಡನೇ ಪತ್ನಿ!

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ ಹತ್ಯೆಗೆ ಆತನ ಎರಡನೇ ಹೆಂಡತಿ ಕಿರಣ ಹಾಗೂ ಇಬ್ಬರು ಬ್ಯುಸಿನೆಸ್ ಪಾರ್ಟ್ನರ್ ಗಳು 10 ಲಕ್ಷ ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ಬೆಳಗಾವಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಸಂಜಯ್ ರಜಪೂತಗೆ ಸುಪಾರಿ ನೀಡಿರುವುದು ಬಯಲಾಗಿದೆ. ಬೆಳಗಾವಿ ಚೆನ್ನಮ್ಮ ನಗರದಲ್ಲಿ 10 ವರ್ಷಗಳ ಹಿಂದೆ ಗ್ಲೋಬಲ್ ಡೆವಲಪರ್ಸ್ ಹೆಸರಿನಲ್ಲಿ ಅಪಾರ್ಟ್‍ಮೆಂಟ್ ನಿರ್ಮಾಣ ಸಂಬಂಧ ಧರ್ಮೇಂದ್ರ, ಶಶಿಕಾಂತ ಹಾಗೂ ರಾಜು ಮಧ್ಯೆ ಪಾರ್ಟ್ನರ್ ಶಿಪ್ ಆಗಿತ್ತು. ಹತ್ತು ವರ್ಷವಾದರೂ ಮೊದಲು ಆರಂಭಿಸಿದ ಪ್ರಾಜೆಕ್ಟ್ ಮುಗಿಯದ ಹಿನ್ನೆಲೆ ವೈಷಮ್ಯವಿತ್ತು.

ಇನ್ನೊಂದೆಡೆ ಎರಡನೇ ಹೆಂಡತಿ ಕಿರಣ ಹಾಗೂ ಪತಿ ರಾಜು ಮೇಲೆ ದ್ವೇಷವಿತ್ತು. ಮೊದಲ ಮದುವೆಯನ್ನು ಬಚ್ಚಿಟ್ಟು ತನ್ನ ವಿವಾಹವಾಗಿದ್ದನೆಂಬ ದ್ವೇಷವಿತ್ತು. ತನ್ನ ಹಾಗೂ ತನ್ನ ಇಬ್ಬರ ಮಕ್ಕಳ ಹೆಸರಿನಲ್ಲಿ ಆಸ್ತಿ ಮಾಡುವಂತೆ ಪ್ರತಿ ದಿನ ರಾಜುಗೆ ಪತ್ನಿ ಕಿರಣ ಒತ್ತಾಯಿಸುತ್ತಿದ್ದರು. ಆದರೆ ರಾಜು ಯಾವುದೇ ಆಸ್ತಿ ಎರಡನೇ ಹೆಂಡತಿ ಹೆಸರಲ್ಲಿ ಮಾಡದೇ ಇದ್ದಿದ್ದಕ್ಕೆ ಸಿಟ್ಟು ಇತ್ತು. ಹೀಗಾಗಿ ಪತಿಯ ಬ್ಯುಸಿನೆಸ್ ‌ಪಾರ್ಟ್ನರ್ ಗಳ ಜೊತೆಗೂಡಿ ಹತ್ಯೆಗೆ ಸಂಚು ರೂಪಿಸಿದ್ದರು. ಇದನ್ನೂ ಓದಿ: ಬಪ್ಪನಾಡು ದೇವಸ್ಥಾನ ಹಾಗೂ ಮಾರಿಕಾಂಬಾ ದೇವಸ್ಥಾನ ಕಟ್ಟಿದವರು ಮುಸ್ಲಿಮರು: ರಿಜ್ವಾನ್

ಮಾರ್ಚ್ 15ರ ಬೆಳಗ್ಗೆ 6 ಗಂಟೆ ಸುಮಾರಿಗೆ ರಾಜು ದೊಡ್ಡಬೊಮ್ಮನ್ನವರ ಹತ್ಯೆಗೈದು ಹಂತಕರು ಪರಾರಿಯಾಗಿದ್ದರು. ಕೆಲ ಸಮಯದ ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಎರಡನೇ ಪತ್ನಿ ಕಿರಣ ಹಾಗೂ ಮತ್ತೋರ್ವ ಆರೋಪಿ ಧರ್ಮೇಂದ್ರ ತಮಗೇನೂ ಗೊತ್ತೇ ಇಲ್ಲದ ರೀತಿ ಸ್ಥಳಕ್ಕೆ ಬಂದು ನಾಟಕವಾಡಿದ್ದರು. ಈ ವೇಳೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬೆಳಗಾವಿ ಗ್ರಾಮೀಣ ಪೋಲಿಸರು ಮೊಬೈಲ್ ಕರೆ ವಿವರ ಪರಿಶೀಲಿಸುವ ವೇಳೆ ಬ್ಯುಸಿನೆಸ್ ಪಾರ್ಟ್ನರ್ ಗಳ ಮೇಲೆ ಅನುಮಾನ ಮೂಡಿತ್ತು. ಹೀಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಸದ್ಯ ಸುಪಾರಿ ಹಂತಕರ ಪೈಕಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಇಬ್ಬರು ಆರೋಪಿಗಳಿಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ಜೇಮ್ಸ್ ಚಿತ್ರವನ್ನೂ ಯಾವುದೇ ಕಾರಣಕ್ಕೂ ತೆಗೆಯಬಾರದು: ಡಿಕೆಶಿ

Comments

Leave a Reply

Your email address will not be published. Required fields are marked *