ಭೀಕರ ಅಪಘಾತ- ಮದ್ವೆ ದಿಬ್ಬಣದ ಟ್ರಕ್ ಮೋರಿಗೆ ಉರುಳಿ 28 ಮಂದಿ ದಾರುಣ ಸಾವು

ಗಾಂಧಿನಗರ: ಮದುವೆ ದಿಬ್ಬಣ ಹೊತ್ತು ತೆರಳುತ್ತಿದ್ದ ಟ್ರಕ್‍ವೊಂದು ಕಂದಕಕ್ಕೆ ಉರುಳಿ ಬಿದ್ದು ಸುಮಾರು 28 ಮಂದಿ ಮೃತಪಟ್ಟಿರುವ ಘಟನೆ ಗುಜರಾತ್‍ನ ಭಾವನಗರ್ ಜಿಲ್ಲೆಯಲ್ಲಿ ನಡೆದಿದೆ.

ಮೃತರಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಂಗಳವಾರ ಬೆಳಗ್ಗೆ ಗುಜರಾತ್‍ನ ಭಾವನಗರ-ರಾಜಕೋಟ್ ಹೆದ್ದಾರಿಯ ಉಮ್ರಾಲಾ ಬಳಿ ಈ ದುರಂತ ಸಂಭವಿಸಿದೆ.

ಭೀಕರ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉರುಳಿಬಿದ್ದ ಟ್ರಕ್‍ನ ಅಡಿಯಲ್ಲಿ ಹಲವರು ಸಿಲುಕಿದ್ದಾರೆ. ಆದ್ದರಿಂದ ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ. ರಕ್ಷಣಾ ಪಡೆಯ ತಂಡವು ಟ್ರಕ್‍ನ ಕೆಳಗೆ ಸಿಲುಕಿದ್ದವರನ್ನು ಕಾಪಾಡಲು ಕಾರ್ಯಚರಣೆ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಟ್ರಕ್ ನಲ್ಲಿ ಸುಮಾರು 60 ಮಂದಿ ಪ್ರಯಾಣಿಕರಿದ್ದು, ಇವರೆಲ್ಲರೂ ಮದುವೆಗೆ ಹೋಗುತ್ತಿದ್ದರು. ಟ್ರಕ್ ಭಾವ್‍ನಗರ್-ರಾಜ್‍ಕೋಟ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಉಮ್ರಲಾ ಬಳಿ ಚಾಲಕನ ನಿಯಂತ್ರಣ ತಪ್ಪಿ ಒಣಗಿದ ಕಾಲುವೆಯ ಸೇತುವೆಗೆ ಡಿಕ್ಕಿ ಹೊಡೆದು ಬಳಿಕ 8 ಮೀಟರ್ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಟ್ರಕ್‍ನಲ್ಲಿದ್ದ ಸುಮಾರು 28 ಮಂದಿ ಸಾವನ್ನಪ್ಪಿದ್ದಾರೆ.

ಈ ದುರಂತದ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಭಾವನಗರ, ಸಿಹೋರ್ ಮತ್ತು ಬೋಟಾಡ್‍ನಿಂದ ಕ್ರೇನ್ ಹಾಗೂ ಇತರ ಪರಿಕರಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಅಗ್ನಿಶಾಮಕ ದಳವೂ ಕಾರ್ಯಾಚರಣೆಯಲ್ಲಿ ತೊಡಗಿದೆ. ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗುತ್ತಿದೆ ಎಂದು ಭಾವನಗರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಟ್ರಕ್‍ನಲ್ಲಿ ಸುಮಾರು 60 ಜನ ಪ್ರಯಾಣಿಕರಿದ್ದರು. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಿದ್ದಾರೆ ಎಂದು ಗುಜರಾತ್ ಪೊಲೀಸ್ ಇನ್‍ಸ್ಪೆಕ್ಟರ್ ಕೆ.ಜೆ. ಕದಪಾದ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *