ಜ.25ರ ಬಂದ್ ಅವಶ್ಯಕತೆಯಿಲ್ಲ, ಮೈಸೂರ್ ಗೂ ಮಹದಾಯಿಗೂ ಏನ್ ಸಂಬಂಧ- ಬಿಎಸ್‍ವೈ ಪ್ರಶ್ನೆ

ಮೈಸೂರು: ಮಹದಾಯಿ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು ಜನವರಿ 25 ರಂದು ನಡೆಸುತ್ತಿರುವ ಕರ್ನಾಟಕ ಬಂದ್ ಅವಶ್ಯಕತೆ ಇಲ್ಲ. ಮೈಸೂರು ಭಾಗಕ್ಕೂ ಮಹಾದಾಯಿ ಬಂದ್ ಗೂ ಏನ್ ಸಂಬಂಧ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರಶ್ನಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಜನವರಿ 25 ರಂದು ಮೈಸೂರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಮುಕ್ತಾಯವಾಗುತ್ತದೆ. ಅಂದು ಮೈಸೂರಿನಲ್ಲಿ ಬಂದ್ ನಡೆದರೆ ಯಾತ್ರೆ ಯಶಸ್ವಿ ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಬಿಎಸ್ ವೈ ಮೈಸೂರು ಭಾಗದಲ್ಲಿನ ಬಂದ್ ಔಚಿತ್ಯವನ್ನೇ ಪ್ರಶ್ನೆ ಮಾಡಿಬಿಟ್ಟರು ಅಂತ ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಅವರು ಸ್ವಯಂಪ್ರೇರಿತವಾಗಿ ನಡೆಸುತ್ತಿರುವ ಬಂದ್ ಇದು. ಅವರಾಗಿಯೇ ಅವರು ಬಸ್ ನಿಲ್ಲಿಸಿ ಕಿತಾಪತಿ ಮಾಡುತ್ತಿದ್ದಾರೆ. ಇಷ್ಟಾದರೂ 25 ರಂದು ಬಿಜೆಪಿಯ ಪರಿವರ್ತನಾ ಸಮಾವೇಶ ನಡೆದೇ ನಡೆಯುತ್ತೆ ಎಂದು ಸ್ಪಷ್ಟಪಡಿಸಿದ ಅವರು, ಬಂದ್ ಗೆ ಬಿಜೆಪಿಯ ಬೆಂಬಲ ಇದೆ ಎಂದು ಹೇಳೋಲ್ಲ. ಆದರೆ ಮಹಾದಾಯಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದರು.

ನಿಜವಾಗಿಯೂ ಹೋರಾಟದ ಅನಿವಾರ್ಯ ಇರೋದು ಕಾಂಗ್ರೆಸ್ ವಿರುದ್ಧ. ನೀರು ಕೊಡುತ್ತೇವೆಂದು ಗೋವಾ ಸಿಎಂ ಹೇಳಿದ್ದಾರೆ. ಅದಕ್ಕೆ ಅಲ್ಲಿನ ಕಾಂಗ್ರೆಸ್ ನಿಂದ ವಿರೋಧ ಇದೆ. ಇದರ ವಿರುದ್ಧ ಕಾಂಗ್ರೆಸ್ ಯಾಕೆ ಪ್ರತಿಭಟನೆ ಮಾಡ್ತಿಲ್ಲ ಎಂದು ಬಿಎಸ್‍ವೈ ಪ್ರಶ್ನಿಸಿದರು.

ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪೊಲೀಸ್ ಬಲ ಪ್ರಯೋಗದ ಮೂಲಕ ಬಿಜೆಪಿ ಹೋರಾಟವನ್ನು ಹತ್ತಿಕ್ಕಲು ಹೊರಟಿದೆ. ಮೈಸೂರಿನ ಪೊಲೀಸ್ ಠಾಣೆಗಳು ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿ ಮಾರ್ಪಟ್ಟಿವೆ. ಬಿಜೆಪಿ ಮುಖಂಡ ಗೋಕುಲ್ ರನ್ನು ವಿನಾಕಾರಣ ಬಂಧಿಸಿ ತೊಂದರೆ ಕೊಡಲಾಗಿದೆ. ಈ ಬಗ್ಗೆ ಬಿಜೆಪಿ ಹೋರಾಟ ಮಾಡಲಿದೆ. ಕಾಂಗ್ರೆಸ್ ದುರಾಡಳಿತಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದರು.

ಬಿಜೆಪಿ ಶಾಸಕರ ಪಕ್ಷಾಂತರ ವಿಚಾರದ ಪ್ರಶ್ನೆಗೆ, ಯಾರು ಯಾವ ಪಕ್ಷದಲ್ಲಿ ಬೇಕಾದರೂ ಇರಲಿ. ಯಾವ ಪಕ್ಷಕ್ಕೆ ಬೇಕಾದರೂ ಸೇರಿಕೊಳ್ಳಲಿ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಜನ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ. 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *