ಗುಜರಾತಿನಲ್ಲಿ 21 ದಿನ ಕಾರಿನಲ್ಲೇ ದಿನ ಕಳೆದ ಮಂಗಳೂರಿಗರು

-ಇಬ್ಬರಿಗೆ ವ್ಯವಸ್ಥೆ ಕಲ್ಪಿಸಿದ ದ.ಕ. ಜಿಲ್ಲಾಧಿಕಾರಿ

ಮಂಗಳೂರು: ಗುಜರಾತ್-ಮಹಾರಾಷ್ಟ್ರ ಗಡಿಪ್ರದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವಕರಿಬ್ಬರು ಲಾಕ್‍ಡೌನ್‍ಗೆ ಸಿಲುಕಿ 21 ದಿವಸ ಕಾರಲ್ಲೇ ಜೀವನ ನಡೆಸಿದ್ದಾರೆ. ನಂತರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿ ಗುಜರಾತಿನ ವಾಲ್ಸಾಡ್ ಜಿಲ್ಲಾಧಿಕಾರಿಗೆ ಪತ್ರ ರವಾನಿಸಿ ಸೂಕ್ತ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

ಪುತ್ತೂರು ತಾಲೂಕು ಸಾಮೆತ್ತಡ್ಕದ ಆಶಿಕ್ ಹುಸೈನ್ ಹಾಗೂ ಅವರ ಸ್ನೇಹಿತ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮೊಹಮ್ಮದ್ ತಾಕೀನ್ ಮರೀಲ್ ಗುಜರಾತಿನಲ್ಲಿ ಸಿಲುಕಿರುವ ಯುವಕರು. ಲಾಕ್ ಡೌನ್ ಘೋಷಣೆಯಾಗುವ ಮೊದಲು ರಾಜ್‍ಕೋಟ್ ನಿಂದ ಕಾರಲ್ಲಿ ಹೊರಟಿದ್ದರು. ಸುಮಾರು 500 ಕಿ.ಮೀ.ಗೂ ಅಧಿಕ ಪ್ರಯಾಣಿಸಿ ಗುಜರಾತ್-ಮಹಾರಾಷ್ಟ್ರ ಗಡಿ ಪ್ರದೇಶ ಗುಜರಾತಿನ ವಾಲ್ಸಾಡ್ ಜಿಲ್ಲೆಯ ಅಂಬರ್’ಗಾವ್ ಭಿಲಾಡ್ ತಾಲೂಕಿನ ಆರ್.ಟಿ.ಓ. ಚೆಕ್ ಪೋಸ್ಟ್ ಬಳಿ ಲಾಕ್‍ಡೌನ್‍ನಿಂದ ಸಿಲುಕಿದ್ದರು.

ಪುನಃ ರಾಜ್‍ಕೋಟ್‍ಗೆ ಹೋಗಲಾರದೇ ಈ ಕಡೆ ಪುತ್ತೂರಿಗೂ ಬರಲಾರದೇ ಕಳೆದ 21 ದಿವಸದಲ್ಲಿ ದಾರಿಬದಿ ಕಾರಿನಲ್ಲೇ ಕಾಲ ಕಳೆಯುವ ಹೀನಾಯ ಪರಿಸ್ಥಿತಿ ಎದುರಾಗಿದೆ. ಸ್ನಾನ ಶೌಚಾಗೃಹಕ್ಕೆ ಹತ್ತಿರದ ಅಂಬರ್ ಹೋಟೆಲ್ ನವರಲ್ಲಿ ಮನವಿ ಮಾಡಿ ಅವಲಂಬಿಸಿರುವ ಯುವಕರು ಆ ರೆಸ್ಟೋರೆಂಟಲ್ಲಿ ಸ್ಥಳ ಇಲ್ಲದ ಕಾರಣ ಕಾರಿನಲ್ಲೇ ಮಲಗುತ್ತಿದ್ದರು. ಈ ಬಗ್ಗೆ ವಿಟ್ಲದ ವ್ಯಕಿಯೊಬ್ಬರು ನೀಡಿದ ಮಾಹಿತಿಯಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆಹಾರ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡುವಂತೆ ವಾಲ್ಸಾಡ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಆಶಿಕ್ ಹುಸೈನ್ ಅಡಕೆ ವ್ಯಾಪಾರದ ಉದ್ದೇಶದಿಂದ ಹಾಗೂ ರಾಜ್‍ಕೋಟ್ ನಲ್ಲಿ ಹೊಸ ಅಂಗಡಿ ತೆರೆಯುವ ಸಲುವಾಗಿ ಒಂದು ತಿಂಗಳ ಹಿಂದೆ ಸ್ನೇಹಿತನ ಜೊತೆ ತೆರಳಿದ್ದರು.

Comments

Leave a Reply

Your email address will not be published. Required fields are marked *