2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ‘ಮಿಷನ್ 123’: ಕುಮಾರಸ್ವಾಮಿ

– ಬಿಜೆಪಿ ಖಾತೆ ಕಿತ್ತಾಟ ನಾಟಕ ಮಕ್ಕಳ ಆಟಿಕೆಯಂತಾಗಿದೆ

ಬೆಂಗಳೂರು: 2023ರ ಚುನಾವಣೆಯಲ್ಲಿ ಜೆಡಿಎಸ್ ಮಿಷನ್ 123ರ ಅಡಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಭರ್ಜರಿ ತಯಾರು ನಡೆಸುತ್ತಿದೆ. ಸಭೆಗಳ ಮೇಲೆ ಸಭೆ ಮಾಡುತ್ತಿರೋ ಜೆಡಿಎಸ್ ಶತಾಯಗತಾಯ ಅಧಿಕಾರಕ್ಕೆ ಬರಲು ಪ್ಲ್ಯಾನ್ ಮಾಡಿದೆ. ಇಂದು ಸಹ ಕಲಬುರಗಿ ವಿಭಾಗದ ಮುಖಂಡರ ಸಭೆಯನ್ನ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಸಲಾಯ್ತು. ಕಲಬುರಗಿ ಪಾಲಿಕೆ ಚುನಾವಣೆ ಜೊತೆಗೆ ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ನಡೆಸಲಾಯ್ತು.

ಸಭೆಯ ಬಳಿಕ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ವಿಧಾನಸಭೆ ಚುನಾವಣೆ ಮೆಗಾ ಪ್ಲಾನ್ ಹೊರ ಹಾಕಿದರು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ್ದು ಮಿಷನ್ 123 ಅಂತ ತಿಳಿಸಿದರು. ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ನ ಭಯ ಶುರುವಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಅನ್ನೋ ಭಯ ಅವರಿಗೆ ಇದೆ ಅಂತ ತಿರುಗೇಟು ಕೊಟ್ಟರು. ಕರ್ನಾಟಕದಲ್ಲಿ 2023ಕ್ಕೆ ಜನತಾದಳ ಟಾರ್ಗೆಟ್ ಮಿಷನ್ 123ಯಲ್ಲಿ ಜೆಡಿಎಸ್ ಕೆಲಸ ಮಾಡುತ್ತೆ ಅಂತ ತಿಳಿಸಿದರು. ಅದೇ ಹೇಗೆ ಸಾಕಾರವಾಗುತ್ತದೆ ಅಂತ ಕಾದು ನೋಡಿ ಅಂತ ಕುತೂಹಲ ಮೂಡಿಸಿದರು.

ಖಾತೆ ಕಿತ್ತಾಟ ನಾಟಕ ಮಕ್ಕಳ ಆಟಿಕೆಯಂತಾಗಿದೆ:
ಬಿಜೆಪಿಯಲ್ಲಿ ಖಾತೆ ಕಿತ್ತಾಟದ ನಾಟಕಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯ ಬೆಳವಣಿಗೆಗಳು ನೋಡಿದ್ರೆ ಮುಂದೆ ಯಾರೇ ಸಿಎಂ ಆದರೂ ಮಕ್ಕಳ ಆಟಿಕೆಯಂತೆ ವಾತಾವರಣ ನಿರ್ಮಾಣವಾಗಿದೆ. ಶಿಸ್ತು ಬದ್ಧ ಪಾರ್ಟಿಯಲ್ಲಿ ಖಾತೆ ಕಿತ್ತಾಟ ನಡೆಯುತ್ತಿದೆ. ಶಿಸ್ತು ಬದ್ಧ ಪಕ್ಷದಲ್ಲಿ ಅಪಹಾಸ್ಯಕ್ಕೆ ಕಾರಣವಾದ ವಿದ್ಯಮಾನಗಳು ನಡೆಯುತ್ತಿವೆ ಅಂತ ಆಕ್ರೋಶ ಹೊರ ಹಾಕಿದರು.

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರೇ ಕುಮಾರಸ್ವಾಮಿ ಅವರ ಕಾಲದಲ್ಲಿ ಕೆಲಸ ಆಗ್ತಿತ್ತು. ಗೌರವ ಸಿಗುತ್ತಿತ್ತು ಅಂತ ಹೇಳಿದ್ದಾರೆ. ನಮ್ಮದೇ ಸರ್ಕಾರ ಇದ್ರೂ ಕೆಲಸ ಆಗ್ತಿಲ್ಲ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ ಹಲವಾರು ಶಾಸಕರಲ್ಲಿ ಅದೇ ಭಾವನೆ ಇದೆ. ನನ್ನ ಕಾಲದಲ್ಲಿ ನಾನು ಎಲ್ಲರಿಗೂ ಗೌರವ ಕೊಡ್ತಿದ್ದೆ ಅಂತ ತಿಳಿಸಿದರು. ಇದನ್ನೂ ಓದಿ: ಯಡಿಯೂರಪ್ಪ ಬದಲಾಗಿದ್ದಾರೆ ಅಂತ ನನಗೆ ಈಗಲೂ ನಂಬಲಾಗ್ತಿಲ್ಲ: ಪ್ರೀತಂಗೌಡ

ಈಗಿನ ಬಿಜೆಪಿ ಪಕ್ಷ ರಕ್ಷಣೆ ಪಡೆಯಲು ಜೆಡಿಎಸ್ ಪಕ್ಷವನ್ನ ಬಳಸಿಕೊಳ್ಳುತ್ತಿದೆ. ಯಾವ ಪಕ್ಷ ರಾಜ್ಯದಲ್ಲಿ ಮುಗಿದೇ ಹೋಯ್ತು ಅಂತ ಹೇಳಿದ್ರೋ ಅದೇ ಪಕ್ಷದ ವ್ಯಕ್ತಿಗಳು ಮುಂದಿನ ರಾಜಕಾರಣ ಜೆಡಿಎಸ್ ನಿಂದಲೇ ಉಳಿಯುತ್ತೆ ಅನ್ನೋ ಭಾವನೆ ಇಟ್ಟುಕೊಂಡಿದ್ದಾರೆ. ಈ ಸರ್ಕಾರ ಉಳಿಬೇಕಾದ್ರೆ ಜೆಡಿಎಸ್ ಇದೆ ಅನ್ನೋ ಗುಮ್ಮ ಬಿಟ್ಟುಕೊಂಡು ಕೆಲವರು ಮಾತಾಡ್ತಿದ್ದಾರೆ. ನೀವೇನಾದ್ರು ಮಾಡಿದ್ರೆ, ಏನಾದ್ರು ಆಕ್ಷನ್ ತಗೊಂಡ್ರೆ ಜೆಡಿಎಸ್ ಪಕ್ಷ ರಕ್ಷಣೆಗೆ ಇದೆ ಅಂತ ಮಾತಾಡ್ತಿದ್ದಾರೆ. ಜೆಡಿಎಸ್ ಪಕ್ಷದ ನೆರಳು, ಜೆಡಿಎಸ್ ಪಕ್ಷದ ಹೆಸರನ್ನು ಹೇಳಿಕೊಂಡು ರಾಜಕಾರಣ ಮಾಡುವ ಅನಿವಾರ್ಯ ಉಂಟಾಗಿದೆ ಅಂತ ಬಿಜೆಪಿಗೆ ತಿರುಗೇಟು ಕೊಟ್ಟರು.

ಬಿಜೆಪಿಗೆ ಬೆಂಬಲ ಕೊಡುವ ಪರಿಸ್ಥಿತಿ ಬಂದ್ರೆ ಅ ಸಮಯದಲ್ಲಿ ತೀರ್ಮಾನ ಮಾಡ್ತೀವಿ. ಈಗ ಅ ಬಗ್ಗೆ ಮಾತಾಡೊಲ್ಲ. ಅ ಸಮಯ ಬಂದಾಗ ಮಾತಾಡ್ತೀನಿ ಅಂತ ತಿಳಿಸಿದ್ರು. ದೇವೇಗೌಡರು ಹೇಳಿರುವ ಬೆಂಬಲದ ವಿಷಯವೇ ಬೇರೆ. ನಮ್ಮ ಪಕ್ಷದ ಪ್ರಾದೇಶಿಕ ನೆಲಗಟ್ಟು ಹೊಂದಿರೋ ಪಕ್ಷ. ಬೆಂಗಳೂರು, ಉತ್ತರ ಕರ್ನಾಟಕದ ಜನರಿಗೆ ನೀರಾವರಿ ಕೊಡುಗೆ ಕೊಟ್ಟವರು ದೇವೇಗೌಡರು. ಆದರೆ ಜನ ಕಾಂಗ್ರೆಸ್, ಬಿಜೆಪಿಗೆ ಮತ ಹಾಕ್ತಾರೆ. ಜೆಡಿಎಸ್ ಮರೆಯುತ್ತಾರೆ. ಬೆಂಗಳೂರು ಜನ ಕಾವೇರಿ ನೀರು ಕುಡಿಯುತ್ತಿದ್ದರೆ ಅದು ದೇವೇಗೌಡರ ಕೊಡುಗೆ. ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು. ಜನರು ಈಗಲಾದ್ರು ಎಚ್ಚೆತ್ತುಕೊಳ್ಳಲಿ. ರಾಷ್ಟ್ರೀಯ ಪಕ್ಷಗಳಿಂದ ನಾಡಿಗೆ ಅಪಮಾನ ಆಗುತ್ತೆ. ಇದಕ್ಕೆ ಜನ ಅವಕಾಶ ಕೊಡಬೇಡಿ ಅಂತ ಮನವಿ ಮಾಡಿದರು. ಇದನ್ನೂ ಓದಿ: ಹಲೋ ಎಲ್ಲಿದ್ದೀಯಾ? ನಿನ್ನ ಮೇಲೆ ಡೌಟ್ ಇಲ್ಲ, ಬಾ ಮನೆಗೆ ಮಾತಾಡೋಣ: ಜಮೀರ್​​​ಗೆ ಸಿದ್ದರಾಮಯ್ಯ ಬುಲಾವ್

Comments

Leave a Reply

Your email address will not be published. Required fields are marked *