200 ರೂ. ನೀಡದ್ದಕ್ಕೆ ಗುಂಡಿಕ್ಕಿ ಸ್ನೇಹಿತನ ಕೊಂದ ಪಾಪಿ

– ಹಣಕ್ಕಾಗಿ ಹಲವು ಬಾರಿ ಪೀಡಿಸಿದ್ದ ಆರೋಪಿ

ಲಕ್ನೋ: ಸಣ್ಣ ಸಣ್ಣ ವಿಚಾರಕ್ಕೂ ಕೊಲೆ ಆಗುವುದನ್ನು ನೋಡಿರುತ್ತೇವೆ. ಆದೇ ರೀತಿ ಇಲ್ಲೊಂದು ಪ್ರಕರಣ ನಡೆದಿದ್ದು, 200 ರೂ. ನೀಡಲು ವ್ಯಕ್ತಿ ನಿರಾಕರಿಸಿದ್ದಕ್ಕೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

ಉತ್ತರ ಪ್ರದೇಶದ ಅಲೀಘರ್ ನಲ್ಲಿ ಘಟನೆ ನಡೆದಿದ್ದು, ಜನಸಂದಣಿಯಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆಯಲ್ಲಿ 30 ವರ್ಷದ ಅನ್ಸಾರ್ ಅಹ್ಮದ್ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಅನ್ಸಾರ್ ಅಹ್ಮದ್ ಮೂರು ಮಕ್ಕಳ ತಂದೆಯಾಗಿದ್ದು, ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಶಂಶಾದ್ ಮಾರ್ಕೆಟ್‍ನಲ್ಲಿ ಪಂಚರ್ ಅಂಗಡಿ ಇಟ್ಟುಕೊಂಡಿದ್ದ. ಶನಿವಾರ ಆರೋಪಿ ಆಸಿಫ್ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಡ್ರಗ್ಸ್ ವ್ಯಸನಿಯಾಗಿದ್ದು, ಗುಂಡು ಹಾರಿಸಿ ಕೊಲೆ ಮಾಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಎಸ್‍ಪಿ ಅಭಿಶೇಕ್ ಕುಮಾರ್ ತಿಳಿಸಿದ್ದಾರೆ. ಆರೋಪಿ ಆಸಿಫ್ ತನ್ನ ಮೋಟಾರ್ ಸೈಕಲ್ ಇಟ್ಟುಕೊಂಡು ಸಾಲ ನೀಡುವಂತೆ ಅಹ್ಮದ್ ಬಳಿ ಕೇಳಿದ್ದಾನೆ. ಆದರೆ ಇದನ್ನು ಅಹ್ಮದ್ ತಿರಸ್ಕರಿಸಿದ್ದಾನೆ.

ಬಳಿಕ ಆರೋಪಿ ಮತ್ತೆ ಅಹ್ಮದ್ ಅಂಗಡಿ ಬಳಿ ಆಗಮಿಸಿ 200 ರೂ. ನೀಡುವಂತೆ ಬೇಡಿಕೊಂಡಿದ್ದಾನೆ. ಆದರೆ ಅಹ್ಮದ್ ಇದಕ್ಕೆ ನಿರಾಕರಿಸಿದ್ದು, ತಕ್ಷಣ ಆಸಿಫ್ ತನ್ನ ಜೇಬಿನಲ್ಲಿದ್ದ ದೇಶಿ ಬಂದೂಕು ತೆಗೆದು ಜನರು ಯಾರಾದರೂ ನೋಡುತ್ತಿದ್ದಾರಾ ಎಂಬುದನ್ನು ಗಮನಿಸಿ ಅಹ್ಮದ್ ತಲೆಯ ಭಾಗಕ್ಕೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಬಳಿಕ ಹತ್ತಿರದಲ್ಲೇ ನಿಲ್ಲಿಸಿದ್ದ ದ್ವಿಚಕ್ರ ವಾಹನ ಏರಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *