ಕುಡಿತ ಬಿಡಿಸಲು ಸೇರಿಸಿದ್ದ ಕೇಂದ್ರದಲ್ಲೇ ಯುವಕ ಸಾವು!

ಬೆಂಗಳೂರು: ಪುನರ್ವಸತಿ ಕೇಂದ್ರದಲ್ಲಿ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದೆ.

ಪ್ರೇಮ್(20) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವಕ. ಪ್ರೇಮ್ ಪೋಷಕರು ಕುಡಿತ ಬಿಡಿಸಲು 25 ದಿನಗಳ ಹಿಂದೆ ಸುಂಕದಕಟ್ಟೆಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು. ಆದರೆ ಶುಕ್ರವಾರ ಪ್ರೇಮ್ ಕೇಂದ್ರದಲ್ಲಿಯೇ ಸಾವನ್ನಪ್ಪಿದ್ದಾನೆ.

ಮೃತ ಪ್ರೇಮ್ ಅಮೇಜಾನ್‍ನಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಪ್ರೇಮ್ ಕುಡಿತ ಹಾಗೂ ಗಾಂಜಾ ಚಟಕ್ಕೆ ಬಿದ್ದಿದ್ದನು. ಹೀಗಾಗಿ ಕುಡಿತ ಬಿಡಿಸಲು ಪೋಷಕರು ಸುಂಕದಕಟ್ಟೆಯಲ್ಲಿರುವ ಮದ್ಯಪಾನ, ಮಾದಕ ವ್ಯಸನಿಗಳ ಹಾಗೂ ಮನೋರೋಗ ಚಿಕಿತ್ಸಾ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು.

ಚಿಕಿತ್ಸೆ ವೇಳೆ ಪುನರ್ವಸತಿ ಕೇಂದ್ರದವರೇ ವಯರ್ ನಿಂದ ಪ್ರೇಮ್ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ನಮ್ಮ ಮಗನ ಕತ್ತಿನ ಮೇಲೆ ಗಾಯದ ಗುರುತುಗಳಿವೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರೇಮ್ ಪೋಷಕರು ಪ್ರಕರಣ ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *