ವಿದ್ಯುತ್ ತಂತಿ ತುಂಡಾಗಿ ಬಿದ್ದರೂ ತಲೆಕೆಡಿಸಿಕೊಳ್ಳದ ಹೆಸ್ಕಾಂ- ಶಾಕ್ ಹೊಡೆದು ಇಬ್ಬರು ಸಾವು

ಬಾಗಲಕೋಟೆ: ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಗೋಟೆ ಗ್ರಾಮದ ಜಮೀನಿನಲ್ಲಿ ನಡೆದಿದೆ.

ಗೋಟೆ ಗ್ರಾಮದ ಸಂತೋಷ್ ಪಾಟೀಲ್(30) ಹಾಗೂ ಬಾಳಾಸಾಹೇಬ್ ಕಟಾವೆ(20) ಮೃತ ದುರ್ದೈವಿಗಳು. ಜಮೀನಿನಲ್ಲಿ ತೊಗರಿ ಬೆಳೆಗೆ ಔಷಧಿ ಸಿಂಪರಣೆ ಮಾಡುವ ವೇಳೆ ಈ ಅವಘಡ ಸಂಭವಿಸಿದೆ. ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ಬಗ್ಗೆ ಹೆಸ್ಕಾಂಗೆ ಮಾಹಿತಿ ತಿಳಿಸಿ ಹಲವಾರು ಬಾರಿ ದುರಸ್ಥಿ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ ದುರಸ್ಥಿ ಕಾರ್ಯ ಮಾಡದೆ ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷಿಸಿದ್ದರು.

ಹೀಗಾಗಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂದು ನಮ್ಮ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಮೃತರ ಪೋಷಕರು ಆರೋಪಿಸಿ ಕಣ್ಣೀರಿಡುತ್ತಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *