ಪಾರ್ಟ್ ಟೈಂ ಕೆಲ್ಸ ಮಾಡಿ ಪಿಯು ಓದುತ್ತಿದ್ದ ವಿದ್ಯಾರ್ಥಿಗಳು ಬಿಎಂಟಿಸಿ ಬಸ್ಸಿಗೆ ಬಲಿ!

ಬೆಂಗಳೂರು: ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಚಂದ್ರಕಾಂತ್ ಹಾಗೂ ಯದುಕುಮಾರ್ ಬಸ್ ಡಿಕ್ಕಿ ಹೊಡೆದು ಮೃತಪಟ್ಟ ಪಿಯು ಕಾಲೇಜಿನ ವಿದ್ಯಾರ್ಥಿಗಳು. ಬೆಂಗಳೂರಿನ ಮೈಸೂರು ರಸ್ತೆ ಗೋಪಾಲನ್ ಮಾಲ್ ಬಳಿ ಇಂದು ಬೆಳಗ್ಗೆ 8 ಗಂಟೆಗೆ ಈ ದುರ್ಘಟನೆ ನಡೆದಿದೆ.

                                                                               ಚಂದ್ರಕಾಂತ್

ಇಂದು ಬೆಳಗ್ಗೆ ಬೆಂಗಳೂರು ಮಹಾನಗರ ಪಾಲಿಕೆಯ ಕಸ್ತೂರ್ಬಾ ಕಾಲೇಜಿಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಹಿಂಬದಿಯಿಂದ ಬಿಎಂಟಿಸಿ ಬಸ್ ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಕಾಂತ್ ಮತ್ತು ಯದುಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಘಟನೆ ಸಂಬಂಧ ಬಿಎಂಟಿಸಿ ಬಸ್ ಚಾಲಕನನ್ನ ಬ್ಯಾಟರಾಯನಪುರ ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಬಸ್ ಚಾಲಕ ಬ್ರೇಕ್ ಫೇಲ್ಯೂರ್ ಆಗಿತ್ತು ಎಂದು ಪೊಲೀಸರ ಮುಂದೆ ಹೇಳುತ್ತಿದ್ದಾನೆ.

                                                                                       ಯದುಕುಮಾರ್

ಚಂದ್ರಕಾಂತ್ ಮೂಲತಃ ಕಲಬುರಗಿ ಮೂಲದವನಾಗಿದ್ದು ತಂದೆ ನಿಧನರಾಗಿದ್ದು, ತಾಯಿ ಮನೆ ಕೆಲಸ ಮಾಡಿ ಮಗನನ್ನು ಓದಿಸುತ್ತಿದ್ದರು. ಬೆಳಗ್ಗೆ ಚಂದ್ರಕಾಂತ್ ಕಾಲೇಜಿಗೆ ಹೋಗಿ ಸಂಜೆ ಗೋಪಾಲನ್ ಮಾಲ್ ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದನು. ಇತ್ತ ಯದುಕುಮಾರ್ ದಿನನಿತ್ಯ ಬೆಳಗ್ಗೆ ಪೇಪರ್ ಹಾಕಿ ನಂತರ ಕಾಲೇಜಿಗೆ ಹೋಗುತ್ತಿದ್ದನು. ಇಂದು ಕೂಡ ಯದುಕುಮಾರ್ ಬೆಳಗ್ಗೆ ಪೇಪರ್ ಹಾಕಿ ಕಾಲೇಜಿಗೆ ಹೋಗುತ್ತಿದ್ದಾಗ ಬಸ್ ಬಲಿ ಪಡೆದುಕೊಂಡಿದೆ.

ಇಬ್ಬರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಮಹಾಪೌರರು, ಆಡಳಿತ ಪಕ್ಷದ ನಾಯಕರು ಖುದ್ದು ಹಾಜರಿದ್ದು ಮೇಲುಸ್ತುವಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. 10 ಲಕ್ಷ ರೂ. ಪರಿಹಾರವನ್ನು ವಿದ್ಯಾರ್ಥಿಗಳ ಪೋಷಕರಿಗೆ ನೀಡಲಾಗುವುದು ಎಂದು ಪಾಲಿಕೆ ಪ್ರಕಟಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *