ತಿರುಮಲ ತಿಮಪ್ಪನಿಗೆ 13.5 ಕೋಟಿ ರೂ. ದೇಣಿಗೆ ನೀಡಿದ ಎನ್‌ಆರ್‌ಐ ಭಕ್ತರು

ಹೈದರಾಬಾದ್: ದೇಶದ ಶ್ರೀಮಂತ ದೇವರು ಎಂಬ ಹೆಗ್ಗಳಿಕೆ ಪಡೆದಿರುವ ತಿರುಮಲ ದೇವಾಲಯಕ್ಕೆ ಎನ್‌ಆರ್‌ಐ ಭಕ್ತರಿಬ್ಬರು ಬರೋಬ್ಬರಿ 13.5 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಅಮೆರಿಕದಲ್ಲಿ ವಾಸಿಸುತ್ತಿರುವ ಆಂಧ್ರಪ್ರದೇಶ ಮೂಲದ ರವಿ ಮತ್ತು ಶ್ರೀನಿವಾಸ್ ಎಂಬವರು ಟಿಟಿಡಿ ಸಮಿತಿಗೆ ಈ ಹಣವನ್ನು ಹಸ್ತಾಂತರ ಮಾಡಿದ್ದಾರೆ. ಟಿಟಿಡಿ ಸಮಿತಿ ವಿಶ್ವದಲ್ಲೇ ಅತೀ ಹೆಚ್ಚು ದೇಣಿಗೆ ಹಣ ಪಡೆಯುವ ಹಾಗೂ ಹೆಚ್ಚು ಭಕ್ತರು ಭೇಟಿ ನೀಡುವ ಎರಡನೇ ಬಹುದೊಡ್ಡ ಧಾರ್ಮಿಕ ಕೇಂದ್ರ ಎಂಬ ಹೆಗ್ಗಳಿಕೆ ಪಡೆದಿದೆ.

ಅಮೆರಿಕದ ಬೋಸ್ಟನ್ ನಲ್ಲಿ ಔಷಧಿ ಕಂಪೆನಿಯೊಂದರ ಸಿಇಒ ಆಗಿ ರವಿ ಕಾರ್ಯನಿರ್ವಹಿಸುತ್ತಿದ್ದು, 10 ಕೋಟಿ ರೂ. ದೇಣಿಗೆ ಹಣವನ್ನು ನೀಡಿದ್ದಾರೆ. ಉಳಿದಂತೆ ಶ್ರೀನಿವಾಸ್ ಅವರು ಜೆಸಿಜಿ ಟೆಕ್ನಾಲಜೀಸ್ ಎಂಬ ಸಂಸ್ಥೆಯನ್ನು ಹೊಂದಿದ್ದು, 3.50 ಕೋಟಿ ರೂ, ದೇಣಿಗೆಯನ್ನು ನೀಡಿದ್ದಾರೆ.

ಟಿಟಿಡಿಗೆ ದೇಣಿಗೆ ಹಣ ನೀಡುವ ವೇಳೆ ಆಂಧ್ರಪ್ರದೇಶ ಸಚಿವ ಅಮರನಾಥ್ ರೆಡ್ಡಿ, ಹಿರಿಯ ಸಿನಿಮಾ ನಿರ್ದೇಶಕ ರಾಘವೇಂದ್ರ ರಾವ್ ಸೇರಿದಂತೆ ಟ್ರಸ್ಟ್ ನ ಸದಸ್ಯರು ಹಾಜರಿದ್ದರು. ಸದ್ಯ ಭಕ್ತರು ನೀಡಿರುವ ದೇಣಿಗೆ ಹಣವನ್ನು ಟಿಟಿಡಿ ಸಮಿತಿ ತಿರುಮಲದಲ್ಲಿ ನಿರ್ವಹಿಸುವ ಅನ್ನದಾನ, ಆಸ್ಪತ್ರೆ ಹಾಗೂ ಅನಾಥ ಮಕ್ಕಳ ಆಶ್ರಮದ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *