ಬೆಂಗ್ಳೂರಲ್ಲಿ ಮಧ್ಯರಾತ್ರಿ ಭಾರೀ ದುರಂತ- 2 ಕಟ್ಟಡ ಕುಸಿತ, ಓರ್ವ ದುರ್ಮರಣ

– ಕಟ್ಟಡದೊಳಗೆ ಸಿಲುಕಿರೋ 7 ಮಂದಿಗೆ ಶೋಧ

ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದ ಎರಡು ಕಟ್ಟಡಗಳ ನೆಲಮಾಳಿಗೆ ಕುಸಿದು ಭಾರೀ ಅನಾಹುತ ಸಂಭವಿಸಿದೆ. ಪುಲಕೇಶಿನಗರ ಸಮೀಪದ ಕೂಕ್‍ಟೌನ್‍ನಲ್ಲಿ ಮಧ್ಯರಾತ್ರಿ 2.15ಕ್ಕೆ ಅನಾಹುತ ಸಂಭವಿಸಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ.

4 ಅಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಸಿಲುಕಿದ್ದ ಏಳು ಕಾರ್ಮಿಕರನ್ನ ರಕ್ಷಿಸಲಾಗಿದೆ. ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. 3 ಅಂತಸ್ಥಿನ ಕಟ್ಟಡದ ನೆಲಮಾಳಿಗೆಯಲ್ಲಿ ವಾಸವಿದ್ದ ಏಳು ಕಾರ್ಮಿಕರಿದ್ದ ಕುಟುಂಬ ಕಟ್ಟಡ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ.

ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ. 3 ಅಂತಸ್ತಿನ ಕಟ್ಟಡ ಹಾಗೂ 4 ಅಂತಸ್ತಿನ ಕಟ್ಟಡದಲ್ಲಿ ಫರ್ನೀಚರ್ ಕೆಲಸ ನಡೆಯುತ್ತಿತ್ತು. ಈ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಉತ್ತರ ಭಾರತದ ಮೂಲದವರು ಎಂದು ಹೇಳಲಾಗುತ್ತಿದೆ.

ಸ್ಥಳೀಯರು ಹೇಳುವ ಪ್ರಕಾರ, ಈ ಕಟ್ಟಡ ನಿರ್ಮಾಣ ಆದ ಜಾಗದಲ್ಲಿ ನೀರಿನಾಂಶ ಜಾಸ್ತಿ ಇತ್ತು. ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಫಿಲ್ಟರ್ ಮರಳು ಬಳಸಿರೋದು ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಎರಡೂ ಕಟ್ಟಡಗಳ ಬೇಸ್‍ಮೆಂಟ್ ಕುಸಿದಿರುವ ಕಾರಣ, ಉಳಿದ ಭಾಗ ಯಾವುದೇ ಕ್ಷಣದಲ್ಲಿ ಉರುಳಿ ಬೀಳುವ ಸಾಧ್ಯತೆ ಇದೆ. ಎನ್‍ಡಿಆರ್‍ಎಫ್ ಮತ್ತು 200ಕ್ಕೂ ಹೆಚ್ಚು ಅಗ್ನಿ ಶಾಮಕ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *