ಮದುವೆಗೆ ಒಪ್ಪದ್ದಕ್ಕೆ, ಶಾಲೆಯಿಂದ ಹಿಂದಿರುಗುತ್ತಿದ್ದ 14ರ ಹುಡುಗಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ!

ಚೆನ್ನೈ: ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ 14 ವರ್ಷದ ಹುಡುಗಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯ ನಡುವಕೊಟ್ಟೈನಲ್ಲಿ ನಡೆದಿದೆ.

ಆರೋಪಿ ಬಾಲಮುರುಗನ್(22) ನೂಲಿನ ಗಿರಣಿಯೊಂದರಲ್ಲಿ ದಿನಗೂಲಿಗಾರನಾಗಿ ಕೆಲಸ ಮಾಡುತ್ತಿದ್ದ. ಹುಡುಗಿ ಒಂಭತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶುಕ್ರವಾರ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಕೃತ್ಯ ಎಸಗಿದ್ದಾನೆ.

ಆರೋಪಿ ಬಾಲಮುರುಗನ್ ಬಾಲಕಿಯನ್ನ ಮದುವೆಯಾಗು ಎಂದು ಅನೇಕ ದಿನಗಳಿಂದ ಕಿರುಕುಳ ನೀಡುತ್ತಿದ್ದನು. ಒಂದು ದಿನ ಆತ ಹುಡುಗಿಯ ಮನೆಗೆ ಕುಡುಗೋಲು ಮತ್ತು ಹಗ್ಗದೊಂದಿಗೆ ಹೋಗಿದ್ದಾನೆ. ಅಲ್ಲಿ ಮನೆಯವರ ಬಳಿ ಹುಡುಗಿಯನ್ನು ಮದುವೆ ಮಾಡಿಕೊಡಿ ಇಲ್ಲ ಅಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಆದರೆ ಮನೆಯವರು ಆರೋಪಿಯನ್ನು ಬೈದು ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಬೈಕಿನಲ್ಲಿ ಶಾಲೆಯ ಬಳಿ ಹೋಗಿದ್ದಾನೆ. ಇದೇ ವೇಳೆ ಹುಡುಗಿ ಇತರೆ ವಿದ್ಯಾರ್ಥಿಗಳ ಜೊತೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಳು. ಆಗ ಏಕಾಏಕಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಹುಡುಗಿಗೆ ಬೆಂಕಿ ಹಚ್ಚಿ ತಕ್ಷಣವೇ ಆರೋಪಿ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಅದೇ ವೇಳೆ ಆಕೆಯ ತಾಯಿ ಆಟೋದಲ್ಲಿ ಹೋಗುತ್ತಿದ್ದರು. ತಕ್ಷಣವೇ ಆಟೋ ಚಾಲಕ ಮತ್ತು ತಾಯಿ ಸೇರಿ ಬೆಂಕಿಯನ್ನು ನಂದಿಸಿ ಸಮೀಪದ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಸದ್ಯಕ್ಕೆ ಹುಡುಗಿಯ ಪೋಷಕರು ಆರೋಪಿ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪರಾರಿಯಾಗಿದ್ದ ಆರೋಪಿಯನ್ನು ಶನಿವಾರದಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಹುಡುಗಿ ದೇಹ 70% ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

Comments

Leave a Reply

Your email address will not be published. Required fields are marked *